Sunday, November 30, 2008

ಭರವಸೆಯ ಬಿತ್ತಿರುವ ಮಹಾಬೆಳಕು

ಒಂದು ಕ್ಷಣ ಸಿದ್ಧಗಂಗಾ ಮಠವಿಲ್ಲದ ತುಮಕೂರನ್ನು ಕಲ್ಪಿಸಿಕೊಳ್ಳಿ. ಅದು ಒಮ್ಮೆಗೇ ನೂರಾರು ವರ್ಷಗಳಷ್ಟು ಹಿಂದೆ ಹೋಗಿಬಿಡುತ್ತದೆ. ಅದನ್ನು ಅವಿದ್ಯೆಯ ಕತ್ತಲೆ ಆವರಿಸಿಬಿಡುತ್ತದೆ. ಹಸಿವಿನ ಬೇಗೆಯಿಂದ ಅದು ಕಂಗಾಲಾಗುತ್ತದೆ !

ಹನ್ನೆರಡನೆಯ ಶತಮಾನದ ಶರಣರು ಹೊಸ ಸಮಾಜವನ್ನು ಕಟ್ಟಲು ಹೊಸ ಜೀವನ ದೃಷ್ಟಿಕೋನವನ್ನು ನೀಡಿದರು. ಜೀವಪರತೆ ಅದರ ಉಸಿರು: ಬದುಕಿಗೆ ಅವರು ನೀಡಿದ ಪ್ರಾಧಾನ್ಯ ಅನನ್ಯವಾದದ್ದು, ಹಾಗಾಗಿ ಬದುಕನ್ನು ಹಸನು ಮಾಡುವುದೇ ಜೀವನದ ಪರಮಗುರಿ ಎಂಬ ನಂಬಿಕೆ ಅವರದು. ಹಿಂದಿನ ವಿರಕ್ತಿಪರ ದೃಷ್ಟಿಕೋನದಂತೆ ಅವರು ಬದುಕನ್ನು ಮಿಥ್ಯ ಎನ್ನಲಿಲ್ಲ: `ಮರ್ತ್ಯ'ವನ್ನು `ಕರ್ತಾರನ ಕಮ್ಮಟ' ಎಂದರು.
ಅದನ್ನು ಕೇವಲ ಅಸ್ಪಷ್ಟ ಆದರ್ಶವಾಗಿಸಲಿಲ್ಲ. ಬದುಕನ್ನು ಉತ್ತಮಿಸಲು ಅವರು ಕಟು ವಾಸ್ತವದ ನೆಲೆಯಿಂದ ಚಿಂತಿಸಿದರು. ಜೀವಿಗಳಿಗೆ ಬದುಕಲು ಮೂಲಭೂತವಾಗಿ ಬೇಕಾದದ್ದು ಆಹಾರ. ದೇಹ ಶ್ರಮದಿಂದ ಕಳೆದುಕೊಂಡ ಶಕ್ತಿಯ ಅನುಭವವಾಗುವುದು ಹಸಿವಿನ ಮೂಲಕ; ಆದ್ದರಿಂದ ಹಸಿವು ಮಾನವನ ಆದಿ ಸಮಸ್ಯೆ. ಅದಕ್ಕೇ ದಾಸಿಮಯ್ಯ ಹಸಿವನ್ನು ಹೆಬ್ಬಾವಿಗೆ ಹೋಲಿಸುವುದು. ಹಸಿವನ್ನು ನೀಗಿಸಲು ಅನ್ನ ಮುಖ್ಯ. ಆ ಅನ್ನದ ಅಥವಾ ಆಹಾರದ ಸಮಸ್ಯೆಯನ್ನು ಪರಿಹರಿಸುವವನನ್ನು ದಾಸಿಮಯ್ಯ `ಗಾರುಡಿಗ' ಎನ್ನುತ್ತಾನೆ. ಆದರೆ ಹಸಿವಿನ ಸಮಸ್ಯೆಯನ್ನು ನೀಗಿಸುವುದು ಅಷ್ಟು ಸುಲಭವೇ? ಹಾಗಾಗಿ ಆ ದಿಸೆಯಲ್ಲಿ ದುಡಿಯುವುದನ್ನೇ ಪೂಜೆ ಎಂದು ವಚನಕಾರರು ಪ್ರತಿಪಾದಿಸಿದರು. ಅದಕ್ಕೇ ಅಂಬಿಗ ಚೌಡಯ್ಯ `ದೇಹಾರವ ಮಾಡುವಣ್ಣಗಳಿರಾ ಒಂದು ತುತ್ತು ಆಹಾರವನಿಕ್ಕಿರೇ' ಎಂದದ್ದು. ದೇಹಾರಕ್ಕಿಂತ ಆಹಾರ ಮುಖ್ಯ. ಆ ಸಮಸ್ಯೆಯ ಪರಿಹಾರಕ್ಕೆ ವಚನಕಾರರು ತೋರಿಸಿದ ದಾರಿಗಳೆಂದರೆ ಕಾಯಕ-ದಾಸೋಹಗಳು. ಕಾಯಕ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ ಉತ್ಪಾದನೆಯ ದಾರಿಯಾದರೇ, ದಾಸೋಹ ಅದರ ವಿನಿಯೋಗದ ವಿಧಾನ.
ವಚನಕಾರರಿಗೂ ಹಿಂದೆ `ದಾನ'ದ ಪರಿಕಲ್ಪನೆಯಿತ್ತು. ಅದು ನೀಡುವುದನ್ನು ಸೂಚಿಸಿದರೂ ಅದರಲ್ಲಿ ಕೊಡುವವನ ಕೈ ಮೇಲೆ, ತೆಗೆದುಕೊಳ್ಳುವವನದು ಕೆಳಗೆ. ಹೀಗಾಗಿ ಕೊಡುವವನಿಗೆ ಮನದಾಳದಲ್ಲಿಯಾದರೂ ಮೇಲರಿಮೆ. ತೆಗೆದುಕೊಳ್ಳವವನಿಗೆ ಕೀಳರಿಮೆ. ಕೊಡುವವನದು ಹೆಮ್ಮೆ. ತೆಗೆದುಕೊಳ್ಳುವವನದು ದೈನ್ಯ. ಈ ರೀತಿಯಲ್ಲಿ ಅದು ಮನುಷ್ಯರನ್ನು ವರ್ಗಗಳಾಗಿ ಮಾಡಲು ಸಹಕಾರಿಯಾಗಿತ್ತು. ಶರಣರು ಅದರ ಬದಲು ದಾಸೋಹದ ಪರಿಕಲ್ಪನೆಯನ್ನು ನೀಡಿದರು. ಇಲ್ಲಿ ಕೊಡುವುದು ಕರ್ತವ್ಯ. ಕೊಟ್ಟಾಗ ಕೃತಕೃತ್ಯಭಾವ. ತೆಗೆದುಕೊಳ್ಳುವವನು ಜಂಗಮ. ಅಂದರೆ ಕೇವಲ ಕಾವಿಧಾರಿಯಲ್ಲ. ಜೀವಂತಿಕೆಯ ಸಂಕೇತ. ಅವನದ್ದು ಸಮಾಜವನ್ನು ತಿದ್ದುವ ಕಾಯಕ. ಆದ್ದರಿಂದ ಅವನು ಪೂಜ್ಯ. ಇಂಥವನಿಗೆ ನೀಡುವುದು ದಾಸೋಹ.
ಅಂದರೆ ಕೊಡುವವನಿಗೆ ಕೃತಕೃತ್ಯತೆಯುಂಟಾಗಬೇಕಾದರೆ ತೆಗೆದುಕೊಳ್ಳುವವನು ಪೂಜ್ಯನಾಗಿರಬೇಕು. ಅಂಥವನಿಗೆ ನೀಡಿದಾಗಲೇ ಸಾರ್ಥಕ್ಯ. ದಾಸೋಹದಲ್ಲಿ ನೀಡುವವನ ಕೈ ಮೇಲಲ್ಲ. ತೆಗೆದುಕೊಳ್ಳುವವನ ಕೈಕೆಳಗಲ್ಲ. ಬೇಡುವವನು ಜಂಗಮನಲ್ಲ; ಬೇಡಿಸಿಕೊಂಬುವವನು ಭಕ್ತನಲ್ಲ'. ಈ ದಾಸೋಹದ ಪ್ರಕ್ರಿಯೆಯಲ್ಲಿ `ದಾನ'ದ ಪರಿಕಲ್ಪನೆಯಲ್ಲಿರುವಂತೆ ಪಡೆಯುವವನ ಆತ್ಮಗೌರವಕ್ಕೆ ಭಂಗವಿಲ್ಲ.
ದಾಸೋಹ ಎಂದರೆ ಯಾವುದನ್ನು ಬೇಕಾದರೂ ನೀಡುವುದು. ಆದರೆ ಮನುಷ್ಯನ ಮೂಲಭೂತ ಅವಶ್ಯಕತೆ ಆಹಾರವಾದ್ದರಿಂದ `ದಾಸೋಹ' ಎಂದರೆ ಆಹಾರವನ್ನು ನೀಡುವುದು ಎಂಬ ಅರ್ಥ ಸಾಮಾನ್ಯವಾಯಿತು. ವಚನಕಾರರ ಕಾಲದಲ್ಲಿಯೂ ಈ ಅರ್ಥ ಜನಜನಿತವಾಗಿತ್ತು. ಅದಕ್ಕೇ ಬಸವಣ್ಣ ಉಣ್ಣುವ ಜಂಗಮಕ್ಕೆ ನೀಡದೆ ಉಣ್ಣದ ಲಿಂಗಕ್ಕೆ ನೀಡುವ ಮನೋಭಾವವನ್ನು ಟೀಕಿಸಿದ್ದು, ಈ ಪರಿಕಲ್ಪನೆ ಎಷ್ಟು ವ್ಯಾಪಕವಾಯಿತೆಂದರೆ ಮುಂದಿನ ಶತಮಾನಗಳಲ್ಲಿಯೂ ಶರಣರ ಅನುಯಾಯಿಗಳಲ್ಲಿ ಇದು ಅನುರಣಿಸಿತು. `ಶೂನ್ಯ ಸಂಪಾದನೆ'ಯ `ಪ್ರಭುದೇವರ ಆರೋಗಣೆ'ಯ ಪ್ರಸಂಗದಲ್ಲಿ ಇದರ ಆತ್ಯಂತಿಕ ಚಿತ್ರಣವಿದೆ. `ನೀವು ಬೋನ. ನಾನು ಪದಾರ್ಥ' ಎಂಬ ಭಾವನೆಯಿಂದ ನೀಡಿದಾಗಲೇ ಪ್ರಭುವಿಗೆ ತೃಪ್ತಿಯಾಗುವುದು ಎಂಬ ಸತ್ಯವನ್ನು ಚೆನ್ನಬಸವಣ್ಣ ಬಸವಣ್ಣನಿಗೇ ಮನವರಿಕೆ ಮಾಡಿಕೊಡುತ್ತಾನೆ.
ಹೀಗೆ, ಜೀವಿಗಳಿಗೆ ಅನ್ನ ನೀಡುವುದಕ್ಕೆ ಪ್ರಥಮ ಆದ್ಯತೆಯನ್ನು ವಚನಕಾರರು ನೀಡಿದ್ದರಿಂದಲೇ ಮುಂದೆ ಲಿಂಗಾಯತ ಮಠಗಳಲ್ಲಿ ದಾಸೋಹಕ್ಕೆ ಅಷ್ಟು ಮಾನ್ಯತೆ ಬಂದದ್ದು. ಮಠಗಳು ಬಯಸಿ ಬಂದವರಿಗೆ ಅನ್ನ ನೀಡುವ ಪರಿಪಾಠವನ್ನು ಮುಂದುವರಿಸಿಕೊಂಡು ಬರದೆ ಹೋಗಿದ್ದಿದ್ದರೆ ಸಮಾಜದ ಕೆಳವರ್ಗದವರು ವಿದ್ಯೆ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಅದೂ ಮಠಗಳಲ್ಲಿನ ದಾಸೋಹದ ಪರಿ ಶರಣರ ಕಾಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಯಿತು. ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ನೇರವಾಗಿ ಅನ್ನ ನೀಡಿದರೆ ಕೊಟ್ಟವನು -ತೆಗೆದುಕೊಂಡವನು ಮುಖಾಮುಖಿಯಾಗುತ್ತಾರೆ. ಪ್ರಾಮಾಣಿಕರಾಗಿದ್ದರೂ ಕೊಡುವವರ ಮನಸ್ಸಿನಲ್ಲಿ ಮೇಲರಿಮೆ ಬರಬಹುದು. ಪ್ರಭುದೇವರಿಗೆ ಆರೋಗಣೆಗಿಕ್ಕುವಾಗ ಬಸವಣ್ಣನ ಮನಸ್ಸಿನ ಯಾವುದೋ ಮೂಲೆಯಲ್ಲಿ ಇಂಥ ಅಹಂಕಾರವಿತ್ತು. ಚೆನ್ನಬಸವಣ್ಣನ ಮಾತುಗಳಿಂದ ಅದು ನಿವಾರಣೆಯಾಯಿತು ಎಂಬ ಚಿತ್ರ ಮೇಲೆ ಉದಾಹರಿಸಿದ ಪ್ರಸಂಗದಲ್ಲಿಯೇ ಇದೆ. ಆದರೆ ಮಠ ಎಂಬುದು ಒಂದು ಸಂಸ್ಥೆ: ಅಲ್ಲಿ ವ್ಯಕ್ತಿಗಿಂತ ವ್ಯವಸ್ಥೆ ಮುಖ್ಯ. ಹೀಗಾಗಿ ಯಾರೋ ಭಕ್ತಕೊಟ್ಟ ವಸ್ತು ಇಲ್ಲಿ ಮಠವೆಂಬ ಮಾಧ್ಯಮದ ಮೂಲಕ ಅವಶ್ಯಕತೆಯಿರುವ ವ್ಯಕ್ತಿಗೆ ಸಂದಾಯವಾಗುತ್ತದೆ. ಹೀಗಾಗಿ ಪಡೆದುಕೊಂಡವನ ಕೃತಜ್ಞತೆ ಮಠಕ್ಕೆ ಸಲ್ಲುತ್ತದೆ. ಆ ಮೂಲಕ ಮಠಕ್ಕೆ ನೀಡಿದವನಿಗೆ ಅದು ಸಲ್ಲಬೇಕು. ಹೀಗಾಗಿ ಕೊಟ್ಟವನು ತೆಗೆದುಕೊಂಡವನು ಮುಖಾಮುಖಿಯಾಗದೆಯೇ ದ್ರವ್ಯ ಇಲ್ಲಿ ಸದ್ವಿನಿಯೋಗವಾಗುತ್ತದೆ. ಭಕ್ತರ ತೊಡಗಿಕೊಳ್ಳುವಿಕೆಯಿಲ್ಲದೆ ಮಠಕ್ಕೆ ಅಸ್ತಿತ್ವವಿಲ್ಲವಾದ್ದರಿಂದ ನೀಡುವವನ ಅಹಂಕಾರಕ್ಕೆ ಇಲ್ಲಿ ಅವಕಾಶವಿಲ್ಲ. ಪಡೆಯುವವನ ಸ್ವಾಭಿಮಾನಕ್ಕೆ ಧಕ್ಕೆಯಿಲ್ಲ.
ಶ್ರೀ ಸಿದ್ಧಗಂಗಾ ಮಠ ಇಂಥ ಉನ್ನತ ಪರಂಪರೆಯ ಜೀವಂತ ಬಿಂದುಗಳಲ್ಲಿ ಒಂದು. ತನ್ನ ಅಮೋಘ ದಾಸೋಹಸಂಪದದಿಂದ ದೀನತೆಯ ಮುಜುಗರವಿಲ್ಲದೆ, ಸ್ವಾಭಿಮಾನಕ್ಕೆ ಊನವಾಗದಂತೆ ನೂರಾರು ವರ್ಷಗಳಿಂದ ಲಕ್ಷಾಂತರ ಜನರ ಹಸಿವನ್ನು ಹಿಂಗಿಸಿ, ವಿದ್ಯೆಯ ಬೆಳಕನ್ನು ಹಚ್ಚಿ ಮತ್ತು ಹಣತೆಗಳನ್ನು ಬೆಳಗಿಸಲು ಅನುವು ಮಾಡಿಕೊಟ್ಟಿದೆ. ಹಿಂದಿನ ಪರಿಸ್ಥಿತಿಗೆ ತಕ್ಕಂತೆ ಇದ್ದಿರಬಹುದಾದ ಅಲ್ಲಿನ ವ್ಯವಸ್ಥೆ ಆಧುನಿಕ ಜಗತ್ತಿಗೆ ಅನುಗುಣವಾಗಿ ಮಾರ್ಪಾಡುಗೊಂಡು ಕೆಳ ವರ್ಗದ ಜನತೆಯ ಬಾಳಿನಲ್ಲಿ ನಂದಾದೀವಿಗೆಯನ್ನು ಬೆಳಗಿಸಿದೆ. ಅನ್ನ ದಾಸೋಹದ ಮೂಲಕ ಆರಂಭಗೊಂಡಿರಬಹುದಾದ ಈ ಮಣಿಹ ಕಳೆದ ಶತಮಾನದಿಂದ ವಿದ್ಯಾ ದಾಸೋಹಕ್ಕೂ ವ್ಯಾಪಿಸಿದೆ. ಸೌಲಭ್ಯವಂಚಿತ ಹಳ್ಳಿಗಾಡು ಪ್ರದೇಶಗಳಲ್ಲಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಅಕ್ಷರಸಂಸ್ಕೃತಿಯ ವಿಸ್ತರಣೆಗೆ ಅಪಾರ ಕೊಡುಗೆ ನೀಡಿದೆ. ಈ ವಿದ್ಯೆ ಕೇವಲ ಔಪಚಾರಿಕ ಶಿಕ್ಷಣಕ್ಕೆ ಸೀಮಿತವಾಗಿಲ್ಲ. ತನ್ನ ಪುಸ್ತಕ ಪ್ರಕಟಣೆ ವಿಚಾರಮಂಥನ-ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಠವು ಜನರಲ್ಲಿ ತಿಳಿವಳಿಕೆಯ ಬೆಳಕನ್ನೂ ಹಂಚುತ್ತಿದೆ.
ನಲವತ್ತೆರಡು ವರ್ಷಗಳ ಹಿಂದೆಯೇ ನಾನು ತುಮಕೂರಿನಲ್ಲಿ ಓದುತ್ತಿದ್ದಾಗ ನನ್ನ ಬಹುಮಂದಿ ಸಹಪಾಠಿಗಳು ಈ ಮಠದಲ್ಲಿ ಉಣ್ಣುತ್ತಿದ್ದವರು. ತುಮಕೂರಿನ ಆಸುಪಾಸಿನಲ್ಲಿ ವಾಸಮಾಡುವ ಜನ ಒಂದಿಲ್ಲ ಒಂದಿ ರೀತಿಯಲ್ಲಿ ಸಿದ್ಧಗಂಗಾ ಮಠಕ್ಕೆ ಒಂದಲ್ಲ ಒಂದು ರೀತಿ ಋಣಿಗಳು. ಆ ಮಠವಿಲ್ಲದಿದ್ದರೆ ತುಮಕೂರು ಜಿಲ್ಲೆ ವಿದ್ಯೆಯ ವಿಷಯದಲ್ಲಿ ಬಹು ಹಿಂದೆ ಉಳಿದುಬಿಡುತ್ತಿದ್ದುದರಲ್ಲಿ ಸಂದೇಹವಿಲ್ಲ. `ಶೂನ್ಯ ಸಂಪಾದನೆಗೆ' ಅಂತಿಮ ರೂಪನ್ನಿತ್ತ ಗೂಳೂರ ಸಿದ್ಧವೀರಣ್ಣೊಡೆಯನ ಜನ್ಮತಾಣಕ್ಕೆ ಸನಿಹವಾದ ಸಿದ್ಧಗಂಗೆಯು ಮಠದ ಮೂಲಕ ವಚನಕಾರರ ಅತ್ಯಂತ ಮಹತ್ವದ ಪರಿಕಲ್ಪನೆಯಾದ ದಾಸೋಹವನ್ನು ಅಖಂಡ ರೀತಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದೆ. ಈಗ ತುಮಕೂರು ವಿದ್ಯೆಯ ಕ್ಷೇತ್ರದಲ್ಲಿ ಕರ್ನಾಟಕದ ಒಂದು ಪ್ರಮುಖ ಕೇಂದ್ರವಾಗಿರುವುದರ ಹಿಂದೆ ಸಿದ್ಧಗಂಗಾ ಮಠದ ಕೊಡುಗೆ ಸಿಂಹಪಾಲಿನದು.
ಮಠ ಎಂಬುದು ಅಮೂರ್ತವಾದುದು ನಿಜ. ಆದರೆ ಇಂಥ ಅಮೂರ್ತತೆಗೆ ಮೌಲ್ಯದ ಚೌಕಟ್ಟು ಹಾಕಿ ಅದನ್ನು ಬೆಳೆಸುವುದು ಅಸಾಮಾನ್ಯ ದುಡಿಮೆಯನ್ನು ಬೇಡುವಂಥದ್ದು. ಕೆಲವು ಶತಮಾನಗಳ ಹಿಂದೆ ಬೀಜರೂಪದಲ್ಲಿ ನೆಲೆಗೊಂಡ ಈ ಮಠ ಈಗ ಮಹಾವಟವೃಕ್ಷವಾಗಿ ಬೆಳೆದಿರುವುದು ಆಕಸ್ಮಿಕವಾಗಿಯಲ್ಲ. ತಾನೇ ತಾನಾಗಿ ಒಂದು ಮಠ ಬೆಳೆಯಬಹುದಾದರೆ ಎಲ್ಲ ಮಠಗಳು ಹಾಗೆ ಬೆಳೆದಿಲ್ಲವೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಬೀಜದಲ್ಲಿ ಮರವಾಗುವ ಶಕ್ತಿಯಿದ್ದರೂ ಅದು ಸಾಕಾರಗೊಳ್ಳುವುದು ಅದಕ್ಕೆ ಪೂರಕ ಪರಿಸರ ದೊರಕಿದಾಗ ಮಾತ್ರ. ಅಂತಹ ಪರಿಸರವೂ ತಾನಾಗಿ ಬರುವುದಲ್ಲ. ಶ್ರಮದಿಂದ ತರಬೇಕಾದದ್ದು. ತಾನು ನಿರ್ವಹಿಸುತ್ತಿರುವ ಎಲ್ಲ ಕ್ಷೇತ್ರಗಳಲ್ಲಿ ಸಿದ್ಧಗಂಗಾಮಠವು ವ್ಯಾಪಕವಾಗಿ ಬೆಳೆದಿರುವುದಕ್ಕೆ ಕಾರಣ ಕಳೆದ ೭೫ಕ್ಕೂ ಹೆಚ್ಚಿನ ವರ್ಷಗಳಿಂದ ಅದರ ಕೈಹಿಡಿದು ನಡೆಸುತ್ತಿರುವ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಕರ್ತೃತ್ವಶಕ್ತಿ ಮತ್ತು ನಾಯಕತ್ವದ ನಿಸ್ವೃಹತೆಗಳು.
ಅವರು ಮಠಾಪತಿಗಳಾದ ಮೇಲೆ ಮಠವು ವಾಮನರೂಪಿಯಾಗಿದ್ದುದು ತ್ರಿವಿಕ್ರಮತ್ವವನ್ನು ಪಡೆಯಿತು. ಅದರ ಬಾಹುಗಳು ದೂರದೂರಕ್ಕೆ ಚಾಚಲು ಕಾರಣವಾಯ್ತು. ಜಿಲ್ಲೆಯ ಬಹುಭಾಗದ ಮೇಲೆ ಮಠದ ಮತ್ತು ಶ್ರೀ ಸ್ವಾಮಿಗಳವರ ಕರುಣಾಹಸ್ತ ಚಾಚಿಕೊಂಡಿದೆ. ಸ್ವತಃ ದೊಡ್ಡ ವಿದ್ವಾಂಸರೂ ಜ್ಞಾನಿಗಳೂ ಆದ ಶ್ರೀಗಳು ಮಾತನಾಡದೆಯೇ ಸುತ್ತಲಿನ ಜನರಲ್ಲಿ ಸಂದೇಶ ಬಿತ್ತಬಲ್ಲ ಚೈತನ್ಯರೂಪಿಗಳಾಗಿದ್ದಾರೆ. ದಾಸೋಹದ ಸಾಕಾರವಾಗಿದ್ದಾರೆ. ತಮ್ಮ ಇಳಿವಯಸ್ಸಿನಲ್ಲೂ ಕ್ಷೇತ್ರದ ಎಲ್ಲ ಮೂಲೆಗಳ ಮೇಲೂ ಕಣ್ಣಿಟ್ಟು ಅದರ ಸ್ವಾಸ್ಥ್ಯಕ್ಕೆ ಕಾರಣೀಭೂತರಾಗಿರುವ ಅವರು ಈ ಮಣಿಹಕ್ಕೆ ತಮ್ಮನ್ನು ತೊಡಗಿಸಿಕೊಂಡ ಮೊದಲಲ್ಲಿ ಹೇಗೆ ಕಾರ್ಯಶೀಲರಾಗಿದ್ದಿರಬೇಕು ಎಂಬುದನ್ನು ಊಹಿಸಿಕೊಳ್ಳ ಹೊರಟರೆ ನಮ್ಮ ಕಲ್ಪನೆಯೂ ತತ್ತರಿಸುತ್ತದೆ.
ಒಂದು ಕ್ಷಣ ಸಿದ್ಧಗಂಗಾ ಮಠವಿಲ್ಲದ ತುಮಕೂರನ್ನು ಕಲ್ಪಿಸಿಕೊಳ್ಳಿ. ಅದು ಒಮ್ಮೆಗೇ ನೂರಾರು ವರ್ಷಗಳಷ್ಟು ಹಿಂದೆ ಹೋಗಿಬಿಡುತ್ತದೆ. ಅದನ್ನು ಅವಿದ್ಯೆಯ ಕತ್ತಲೆ ಆವರಿಸಿಬಿಡುತ್ತದೆ. ಹಸಿವಿನ ಬೇಗೆಯಿಂದ ಅದು ಕಂಗಾಲಾಗುತ್ತದೆ ! ಅಂಥ ಪವಾಡ ಇಲ್ಲಿ ನಡೆದಿದೆ. ಅದಕ್ಕೆ ಮುಖ್ಯ ಕಾರಣ ಶ್ರೀ ಶ್ರೀ ಶಿವಕುಮಾರಸ್ವಾಮಿಗಳವರು. ಪವಾಡವೆಂದರೇನು? ಮಾನವರು ಮಾಡಲು ಸಾಧ್ಯವಿಲ್ಲದ ಕಾರ್ಯಗಳನ್ನು ಮಾಡುವುದು ಎಂಬುದು ಸಾಮಾನ್ಯ ತಿಳಿವಳಿಕೆ. ದೇವಮಾನವರನ್ನು ಪವಾಡ ಪುರುಷರು ಎಂದು ಕರೆಯಲಾಗುತ್ತದೆ. ಆದರೆ ವಚನಕಾರರು ಇಂಥ ನಂಬಿಕೆಗಳನ್ನು ಅಲ್ಲಗಳೆದರು. ಬಸವಣ್ಣನೇ ಪವಾಡಗಳನ್ನು `ಹಗರಣಿಗನ ಚೋಹ' ಗಳೆಂದು ಕರೆಯುತ್ತಾನೆ. ಅಂದರೆ ನಾಟಕದಲ್ಲಿನ ಪಾತ್ರಗಳು ಸುಳ್ಳು ಎಂಬುದು ಇಂಗಿತಾರ್ಥ. ಆದರೆ ಕಾವ್ಯಗಳಲ್ಲಿ ಬಸವಣ್ಣನದೆಂದು ಆರೋಪಿಸಲಾದ ಪವಾಡಗಳನ್ನು ವಿಶ್ಲೇಷಿಸಿದರೆ ಕವಿಗಳು ವರ್ಣಿಸುವ ಅನೇಕ ಪವಾಡಗಳು ಸಾಂಕೇತಿಕವಾದವುಗಳೆಂಬುದು ಮನವರಿಕೆಯಾಗುತ್ತದೆ. ಠಕ್ಕರು ಕಟ್ಟಿಕೊಂಡಿದ್ದ ಬದನೆಕಾಯಿಗಳನ್ನು ಬಸವಣ್ಣ ಲಿಂಗಗಳಾಗಿ ಮಾಡಿದನೆಂದರೆ ಏನರ್ಥ? ಕಾಯಿಗಳನ್ನು ಕಲ್ಲುಗಳನ್ನಾಗಿ ಮಾಡಿದನೆಂದೆ? ಅಲ್ಲ, ತನ್ನ ಮಾರ್ಗವನ್ನು ಅಲ್ಲಗಳೆಯುತ್ತಿದ್ದವರೂ ತನ್ನ ಅನುಯಾಯಿಗಳಾಗುವಂತೆ ತನ್ನ ವರ್ಚಸ್ಸಿನಿಂದಾಗಿ ಮನಃಪರಿವರ್ತನೆ ಮಾಡಿದ ಎಂದು. ಅದು ಸಾಧ್ಯವಾದದ್ದು ಬಸವಣ್ಣನ ವ್ಯಕ್ತಿತ್ವದಿಂದಾಗಿ. ಆ ಅರ್ಥದಲ್ಲಿಯೇ ನಾನು ಸಿದ್ಧಗಂಗಾ ಮಠದಲ್ಲಿ ಪವಾಡ ನಡೆದಿದೆ ಎಂದದ್ದು. ಅದರ ಚಾಲಕ ಶಕ್ತಿಯಾಗಿ ಅಸಂಖ್ಯ ಜೀವರಲ್ಲಿ ಭರವಸೆಯ ಬೆಳಕನ್ನು ಬಿತ್ತಿರುವ ಈ ಮಹಾಬೆಳಕು ಮಾಡಿರುವುದು ಪವಾಡವಲ್ಲದೆ ಇನ್ನೇನು?
ನಿರ್ಲಕ್ಷ್ಯ ನಮ್ಮ ನಮ್ಮ ಸಮುದಾಯದ ಬಗೆಗಿರುವ ನಿರಭಿಮಾನ ಮತ್ತು ನಮ್ಮ ಆಸಕ್ತಿಯೆಲ್ಲ ದೂರದ ಅನ್ಯಸಮುದಾಯಗಳಲ್ಲಿ ('ಅಲ್ಲಿರುವುದು ನಮ್ಮ ಮನೆ, ಇಲ್ಲಿರುವುದು ಸುಮ್ಮನೆ' ಎಂಬ ಭಾವ), `ಅವರಿಗೆ' ಯಾವ ದುರಂತವಾದರೇನು `ನಮ್ಮ'ಸ್ವಾರ್ಥ ಪೂರೈಸಿದರಾಯ್ತು ಎಂಬ ಸಂಕುಚಿತ ಭಾವ, ದುಡಿಯದೇ ಬಂದುದನ್ನು ಕಬಳಿಸುವ ನೀಚತನ ಮತ್ತು ಹೊಣೆಗಾರಿಕೆಯನ್ನು ಪೂರೈಸದೆ ಹಕ್ಕನ್ನು ಹಕ್ಕೊತ್ತಾಯವನ್ನಾಗಿಸುವ ಆತುರ ಮತ್ತು ಹಠ-ಇವೆಲ್ಲವೂ ಸಮಾಜದ ಅಸ್ವಾಸ್ಥ್ಯಕ್ಕೆ ಫಲವಾದ ಭೂಮಿಕೆಯನ್ನು ಸಿದ್ಧಗೊಳಿಸುತ್ತಲಿವೆ ಅಥವಾ ಅಸ್ವಾಸ್ಥ್ಯ ಭಾಗಗಳೇ ಆಗಿರುತ್ತವೆ ಎಂದರೂ ತಪ್ಪಿಲ್ಲ.
*****

ಸಾಧನೆಯ ಸಹ್ಯಾದ್ರಿ

ಸಿದ್ಧಗಂಗಾ ಶ್ರೀಗಳು ಪ್ರಶಾಂತವಾಗಿ ಹರಿವ ನಿರಂತರತೆಯ ಜಲಧಾರೆ. ಮೆಲ್ಲಮೆಲ್ಲನ ಸುರಿವ ಹನಿಗಳು ಮಣ್ಣಿನಾಳಕ್ಕಿಳಿದು ಅಲ್ಲೆಲ್ಲ ತಂಪರಡುತ್ತವೆ. ಧೋಗುಟ್ಟು ಸುರಿವ ನೀರು ತಾನುಬಿದ್ದ ತಾಣವನ್ನೆಲ್ಲ ಕೊಚ್ಚಿಕೊಂಡೇ ಸಾಗುತ್ತದೆ; ಅಲ್ಲೇನೂ ಉಳಿಸದಂತೆ. ಶ್ರೀಗಳ ಬಹುಮುಖ ವ್ಯಕ್ತಿತ್ವ ಧುಮ್ಮಿಕ್ಕಿ ಭೋರ್ಗರೆವ ಜಲಪಾತವಲ್ಲ. ಜುಳುಜುಳು ಸುಸ್ವರನಾದಗೈವ ಪುಣ್ಯ ಸಲಿಲ. ಶ್ರೀಗಳು ಯುಗಪುರುಷರು.

ಉರುಳುವವು ಗಳಿಗೆಗಳು
ಹೊರಳುವವು ದಿವಸಗಳು
ತುದಿಮೊದಲಿರದನಂತತೆಯ ಮರೆಗೆ
ಇಂದುಗಳು ನಾಳೆಗಳು
ಹಿಂದೆ ಹಿಂದೋಡುವವು
ಏಣಿಕೆಗಳ ಸನಹುಗಳ ಮರೆಸುತ್ತ ಹಿಂದೆ...

ಎಂಬ ಕವಿಯೊಬ್ಬರ ಮಾತು ಈ ಸಂದರ್ಭದಲ್ಲಿ ನೆನಪಾಗುವುದು ಅರ್ಥಪೂರ್ಣವೆನಿಸುತ್ತದೆ. ಪ್ರಸ್ತುತದಲ್ಲಿ ಮನೆ ಮನೆಯ ಮಾತಾಗಿರುವ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಿರಕ್ತಾಶ್ರಮವನ್ನು ಸ್ವೀಕರಿಸಿ ಸಮಾಜಮುಖಿಯಾಗಿ ದುಡಿಯುತ್ತಿರುವ ತುಡಿಯುತ್ತಿರುವ ಈ ಸೇವಾಮಣಿಹಕೆ ನೂರು ತುಂಬಿ ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ.
ಕರ್ನಾಟಕ ಕೀರ್ತಿಯ ಕಳಸವಾಗಿರುವ ಶ್ರೀ ಸಿದ್ಧಗಂಗಾ ಮಠವು ವಿಚಾರವಾದಿ, ಸಮತಾವಾದಿ ಬಸವಣ್ಣನವರ ಜೀವನ ಮೌಲ್ಯಗಳ ಪ್ರಾತಿನಿಕ ಪ್ರಯೋಗಶಾಲೆಯೇ ಆಗಿದೆ. `ನೀರಿಂಗೆ ನೈದಿಲಿಯೇ' ಶೃಂಗಾರ, ಗಗನಕೆ ಚಂದ್ರಮನೇ ಶೃಂಗಾರ. ಸಮುದ್ರಕ್ಕೆ ತೆರೆಯೇ ಶೃಂಗಾರ ಶರಣನಾ ನೊಸಲಿಂಗೆ ವಿಭೂತಿಯೇ ಶೃಂಗಾರ' ಎಂಬ ವಚನೋಕ್ತಿಯಂತೆ ಶ್ರೀ ಸಿದ್ಧಗಂಗಾ ಕ್ಷೇತ್ರದ ಸಾಧನೆಯ ಸಹ್ಯಾದ್ರಿಗೆ ಸಹನಾಸಿರಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳೇ ಶೃಂಗಾರ ಪ್ರಾಯರು ಎಂದರೆ ಅತಿಶಯೋಕ್ತಿಯಾಗಲಾರದು.

ಉರಿವ ಸೂರ್‍ಯನ ಮೈ ಎತ್ತೆತ್ತ ನೋಡಿದರೂ ತಾನುರಿದು ಬೆಳಕ ಬೀರುವುದೇ ಅದರ ನೈಜ ಸ್ವಭಾವ. ಅಂತೆಯೇ ಶ್ರೀಗಳ ಕಾರ್‍ಯಚಟುವಟಿಕೆಗಳನ್ನು ಯಾವುದೇ ದಿಕ್ಕಿನಿಂದ ನೋಡಿದರೂ ಪ್ರಜ್ವಲಮಾನ್ಯ ಪ್ರಖರ ಕಿರಣಬೀರುವಂತಹವು.
ಕಾಯಕ ಕ್ಷೇತ್ರದಲ್ಲಿ ಶ್ರೀಮಠದ ವ್ಯಾಪ್ತಿ ಬಹುವಾದುದು. ಕಾಯಕ ಕ್ಷೇತ್ರಕ್ಕೂ ಧಾರ್ಮಿಕ ಮೆರುಗನ್ನು ನೀಡಿರುವ ಶ್ರೀಗಳ ಕುರಿತು ಹೇಳುವಾಗ ಶರಣರ ವಿಚಾರಧಾರೆ ಸುರಣಿಗೊಳ್ಳುತ್ತವೆ.

`ಗುರು ಲಿಂಗಜಂಗಮವಾದರೂ ಕಾಯಕದಿಂದಲೇ ಮುಕ್ತಿ'
`ನೆರೆಮನೆಗೆ ಹೋಗಿ ತನ್ನುದರದ ಹೊರೆಯದ ಅಚ್ಚ ಶರಣನ ಕಂಡರೆ
ನಿಶ್ಚಯವಾಗಿ ಕೂಡಲ ಸಂಗಯ್ಯನೆಂಬೆ '
`ಕಾಯಕ ನಿರತನಾದೊಡೆ ಗುರುಲಿಂಗ ಜಂಗಮದ ಹಂಗ ಹರಿಯಬೇಕು'
`ಆವಾವ ಕಾಯಕವೆ ಮಾಡಿದರೂ ಬಸವೇಶ ಅವಗಂ ಶರಣರನು ಸೇವಿಪನು ಬಸವೇಶ'

ಕಾಯಕ ಕುರಿತ ಶರಣರ ಈ ಸಿದ್ಧಾಂತಗಳನ್ನು ಅಕ್ಷರಶಃ ಪರಿಪಾಲಿಸುತ್ತಿರುವ ಶ್ರೀ ಶ್ರೀಗಳು ಕಾಯಕ ಯೋಗಿಗಳೇ ಆಗಿದ್ದಾರೆ. ಆಲಸ್ಯತನ, ಬಡತನ, ನಿರುದ್ಯೋಗ ನಿರ್ಮೂಲನೆಗೆ ಕಾಯಕವೊಂದು ರಾಮಬಾಣ ಎನ್ನುತ್ತಾರೆ ಶ್ರೀಗಳು. ಉತ್ತಮ ವ್ಯಕ್ತಿತ್ವರೂಪುಗೊಳ್ಳುವುದು ಸತ್ಯ ಶುದ್ಧ ಕಾಯಕದಿಂದ ಮಾತ್ರ. `ಇಂದಿಂಗೆಂತು ನಾಳಿಂಗೆಂತೆಂದು ಚಿಂತಿಸಲೇಕೆ. ತಂದಿಕ್ಕುವ ಶಿವಂಗೆ ಬಡತನವುಂಟೇ' ಈ ವಚನದ ಭಾವವನ್ನು ಅರಿತ ನಿರಾಳ ನಿಲುವಿನ ಅನುಭಾವಿ ಈ ಶಿವಯೋಗಿ.

`ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು
ಅನುಗೊಂಬನಿತುಂ ಕಾಯಕಂ ನಡೆಯುತ್ತಿರಬೇಕು'

ಎಂಬ ಈ ಮಾತಿನಲ್ಲಿ ನಂಬುಗೆಯಿತ್ತವರು. ಕಾಯಕವೆಂಬುದು ಜೀವನ ಮೌಲ್ಯದ ದ್ಯೋತಕ. ಕಾರ್ಯವಿಲ್ಲದೆ ಖಾಲಿಯಿರುವ ಮನಸ್ಸು ಪೂಜ್ಯರದಲ್ಲ. ಈ ಇಳಿವಯಸ್ಸಿನಲ್ಲೂ ಅವರ ಆತ್ಮದಲ್ಲುದುಗಿರುವ ಚಿರಯೌವ್ವನ, ಹುರುಪು, ಹುಮ್ಮಸ್ಸು, ಕಾರ್ಯಾಸಕ್ತಿಗಳು, ಕಾರ್ಯ ಯೋಜನೆಗಳು ಇಂದಿನ ಯುವ ಪೀಳಿಗೆಗೆ ಮಾರ್ಗದೀವಿಗೆಗಳು. ಅವರ ಈ ವ್ಯಕ್ತಿತ್ವವನ್ನು ನಾವು ಎಡಬಿಡದೆ ಪರಿಪಾಲಿಸಿದಲ್ಲಿ ಸುಖಸಮಾಜವೇ ನಿರ್ಮಾಣವಾದೀತು. ಈ ನಿಟ್ಟಿನಲ್ಲಿ ಶ್ರೀಮಠವು ಸದ್ದುಗದ್ದಲವಿಲ್ಲದೆ ಸಿದ್ಧಿ ಸಾಧನೆಗೈಯುತ್ತ ತನ್ನನ್ನು ತಾನು ಬೆಳಗಿಸಿಕೊಂಡು ಭಕ್ತಸಮೂಹವನ್ನು ಬೆಳಗಿಸುವ ನಂದಾದೀಪ. ಕಾಯಕ ನಿಷ್ಠೆಯಿಂದ ಅಸಾಧ್ಯವನ್ನು ಸಾಧ್ಯವಾಗಿಸಿದ ಮಹಾಮನೆಯ ಜೀವಂತ ಪ್ರತಿನಿಯಂತಿದೆ ಶ್ರೀ ಸಿದ್ಧಗಂಗಾ ಕ್ಷೇತ್ರವಿಂದು.

ನೀಳಕಾಯದ ದೇಹಕ್ಕೆ ನೂರು ತುಂಬಿರುವಾಗ ಈಗಲೂ ರಾತ್ರಿ ಎರಡು ಗಂಟೆಗೆ ಎಚ್ಚರಗೊಂಡು ಅಧ್ಯಯನನಿರತರಾಗಿ, ಪೂಜಾಕೈಂಕರ್ಯ ಸಲ್ಲಿಸಿ, ತನ್ನನ್ನೆ ನಂಬಿರುವ ಸಾವಿರ ಸಾವಿರ ಎಳೆಮನಸ್ಸುಗಳನ್ನು ಪ್ರಫುಲ್ಲಗೊಳಿಸಿ, ಭಕ್ತರನ್ನು ಸಂತೈಸಿ ಅವರ ಬೇಕುಬೇಡಗಳನ್ನು ಪೂರೈಸಿ ಉಳಿದ ನಿತ್ಯದ ಕಾರ್‍ಯಗಳತ್ತ ಮುಖಮಾಡುವ ಆ ದೇಹಕ್ಕೆ ದಣಿವಾಗುವುದಿಲ್ಲವೇ? ಇದು ಎಲ್ಲರ ಪ್ರಶ್ನೆ. ಶ್ರೀಗಳ ಜಪತಪಗಳೇ ವೈಶಿಷ್ಟ್ಯಮಯವಾದವು. `ಜಪಿಸಬೇಕು ಜಪಿಸಬೇಕು ಸತ್ಯಶೀಲವ, ಪರಹಿತವ, ಜಪಿಸಬೇಕು ಜಪಿಸಬೇಕು ಗುರು ಲಿಂಗ-ಜಂಗಮದಾಸೋಹವ' ಎಂಬ ಜೀವನ ಮಂತ್ರವನ್ನು ಸಕಲರಿಗೂ ಸಾರಿದ ಈ ಮಹಾನ್ ವ್ಯಕ್ತಿತ್ವದ ಎದುರಲ್ಲಿ ದಣಿವು ಶಿರಬಾಗಿಬಿಡುತ್ತದೆ.

ವಿದ್ಯಾನಾಮ ನರಸ್ಯರೂಪಮಕಂ ಪ್ರಚ್ಛನ್ನಗುಪ್ತಂ ಧನಂ
ವಿದ್ಯಾಭೋಗಖರಿ ಯಶಸ್ಸುಖಖರಿ ವಿದ್ಯಾಗರೂಣಾಂ ಗುರುಃ
ವಿದ್ಯಾಬಂಧು ಜನೋವಿದೇಶಗಮನೆ ವಿದ್ಯಾಪರಾಃ ದೇವತಾಃ
ವಿದ್ಯಾರಾಜಸುಪೂಜ್ಯತೇ ನತುಧನಂ ವಿದ್ಯಾ ವಿಹೀನ ಪಶುಃ

ಈ ಶ್ಲೋಕವು ವಿದ್ಯೆಯ ಮಹತ್ವವನ್ನು ತೋರುತ್ತಿದೆ. ಶಿಕ್ಷಣವು ಸಾಂಸ್ಕೃತಿಕ ಕ್ರಿಯೆಯ ಮೂಲಧಾತು. ವ್ಯಕ್ತಿತ್ವ ವಿಕಸನಕ್ಕೆ ಹಾದಿ. ಅನಕ್ಷರತೆ ಬದುಕನ್ನು ಹಾಳುಗೆಡವುತ್ತದೆ. ವಿದ್ಯೆಯಿಲ್ಲದವನು ಪಶುವಿಗೆ ಸಮಾನ ಎನ್ನುತ್ತಾರೆ. ಶೈಕ್ಷಣಿಕ ಚಿಂತನಾಗಾರವಾಗಿರುವ ಶ್ರೀಮಠದ ಕಾರ್‍ಯವೈಖರಿ ಭಾರತಕ್ಕೆ ತಾನು ನೀಡಿರುವ ಅಮೂಲ್ಯ ಕೊಡುಗೆ. ದಾನದಾನಕ್ಕಿಂತ ವಿದ್ಯಾದಾನ ದೊಡ್ಡದು. ಬಡ, ದೀನದಲಿತ ವಿದ್ಯಾರ್ಥಿಗಳೇ ಶ್ರೀಮಠದ ಆಸ್ತಿ. `ಪರೋಪಕಾರಾರ್ಥಂ ಇದಂ ಶರೀರಂ' ಎಂಬಂತೆ ಭಾರತದ ಭವ್ಯ ಪ್ರಜೆಗಳ ನಿರ್ಮಾಣಕ್ಕಾಗಿಯೇ ಗಂಧದ ಕೊರಡಿನಂತೆ ಜೀವ ಸವೆಸುತ್ತಾ ಅಹರ್ನಿಶಿ ದುಡಿಯುತ್ತಿರುವುದು ಸರ್ವವಿತ. `ಕುಲದಲ್ಲಿ ಶೂದ್ರನಾದಡೇನು? ಮನದಲ್ಲಿ ಮಹದೇವ ನೆಲೆಗೊಂಡವನೇ ವೀರಶೈವ ನೋಡಾ' ಎಂಬ ಉಕ್ತಿಯನ್ನು ಮಣಿಹದಲ್ಲಿ ಹೊತ್ತು ದಶಕ ದಶಕಗಳಿಂದಲೂ ಲೇಸ ಸಾರುವ ಶ್ರೇಷ್ಠ ಕುಲಜರಾಗಿದ್ದಾರೆ. ಪೂಜ್ಯರು. ಆದರ್ಶಯುತ ಮಹಾಮಠಾಶರಾಗಿ ವ್ಯಕ್ತಿ ಕಲ್ಯಾಣದೊಂದಿಗೆ ವಿಶ್ವ ಕಲ್ಯಾಣ ಕಾಣುವ ವಿಶ್ವಪ್ರೇಮಿಗಳು. ಎಲ್ಲ ಹೃದಯದೊಳು ಲೋಕ ಪ್ರೀತಿಯ ಬೆಳಕಬೀರಿ ` ಇವ ನಮ್ಮವ ಇವ ನಮ್ಮವ' ನೆಂದು ಎಲ್ಲರನ್ನು ಅಪ್ಪಿ ಒಪ್ಪಿಕೊಳ್ಳುವ ವಿಶ್ವಚೇತನರು. ಜಾತಿಮತ ಧರ್ಮ ಪಂಗಡ ಬಡವ ಬಲ್ಲಿದ. ಮೇಲು ಕೀಳು ಕುಲಪಂಗಡಗಳನ್ನು ಬದಿಗೊತ್ತಿ ಮಕ್ಕಳ ಬಾಳಬುತ್ತಿಗೆ ಸವಿತುಂಬುತ್ತಿರುವ ಇವರು ಸರ್ವಧರ್ಮ ಸಮನ್ವಯರು.

ನಮ್ಮದು ಜಾತ್ಯತೀತ ರಾಷ್ಟ್ರವೆಂಬ ಮಾತನ್ನು ಸೃಜಗೊಳಿಸಿರುವವರೇ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು. ಅನ್ನದಾನದೊಂದಿಗೆ ಸಹಸ್ರ ವಿದ್ಯಾರ್ಥಿಗಳಿಗೆ ಅರಿವಿನ ದಾನವನ್ನು ನೀಡುತ್ತಾ ತೆರೆಯೊಳಗೆ ಸುರಪುರವನ್ನು, ನರನೊಳಗೆ ಹರನನ್ನು ಕಾಣುವ ಅವರ ದೃಷ್ಟಿಕೋನವೇ ಅಮೋಘವಾದುದು. ಆದೆಷ್ಟೋ ಬಾರಿ ವಿದ್ಯಾರ್ಥಿಗಳ ಮುಂದಲೆ ನೇವರಿಸಿ ತಾವೇ ತಮ್ಮ ಕೈಯಾರ ಉಣಬಡಿಸಿದ ಮಾತೃವಾತ್ಸಲ್ಯಮಯಿ, ಸಾಮಾನ್ಯವಾಗಿ ಸರಸ್ವತಿ-ಅನ್ನಪೂರ್ಣೆಯರು ಒಂದೆಡೆ ಒಗ್ಗೂಡುವುದೇ ಬಹು ಅಪರೂಪವಾಗಿರುವ ಈ ಸಂದರ್ಭದಲ್ಲಿ ಇಬ್ಬರೂ ನಗುನಗುತ್ತಾ ಇಲ್ಲಿ ನೆಲೆಯೂರಲು ಶ್ರೀಗಳ ಆತ್ಮಬಲವೇ ಮುಖ್ಯವಾಗಿದೆ.
ಲೌಕಿಕದಲ್ಲಿ ಅಲೌಕಿಕತೆಯನ್ನು ಕಂಡವರು. ತಮ್ಮ ಸಾತ್ವಿಕ ಮತ್ತು ತಾತ್ವಿಕತೆಯಿಂದ ವೈಜ್ಞಾನಿಕ ಮತ್ತು ಧಾರ್ಮಿಕತೆಯ ಸಾಮರಸ್ಯವನ್ನು ಬೆಸೆದವರು. ಪೂಜ್ಯರ ಮಾತುಗಳು ಸ್ಪಷ್ಟ ನೇರ ನಿಖರ ವಾಣಿಗಳು. `ನ್ಯಾಯ ನಿಷ್ಠೂರಿ ಶರಣ ಲೋಕವಿರೋ, ಶರಣ ಯಾರಿಗೂ ಅಂಜನು' ಎಂಬ ಮಾತಿನಂತೆ ತಮ್ಮ ಮಾತಿನ ಸಂಸ್ಕಾರ ಜ್ಯೋತಿಯಿಂದ ಸರ್ವರನ್ನು ಬೆಳಗಿಸುವ ಮಹಿಮರು.

ನಿಸರ್ಗ ಸರಳ ಸಹೃದಯಿಯಾದ ಶ್ರೀಗಳು ಸಾಮಾಜಿಕ ಚಿಂತಕರು. `ಸರ್ವೇ ಜನಾಃ ಸುಖಿನೋ ಭವಂತು' ಎಂಬ ಗಂಭೀರ ಚಿತ್ತರು. ಪಾಂಡಿತ್ಯ ಪ್ರಭಂಜನರು. ನೀತಿಗೆ ಸೆಲೆಯಾಗಿ ನೇತ್ಯಾತ್ಮಕವನ್ನು ಎತ್ತಿ ಹಿಡಿದವರು. ಸೂರ್ತಿಯ ನೆಲೆಯಾದವರು. ವಿದ್ವತ್ ಸಂಪನ್ನರು. ನಡೆನುಡಿಯ ಸಮಚಿತ್ತರು ಎಂಬ ವಚನದಂತೆ ಆತ್ಮನ್ವೇಷಣೆಗೆ ಆದ್ಯತೆ ನೀಡುತ್ತಲೇ ಅನ್ಯರನ್ನು ಆತ್ಮಚಿಕಿತ್ಸೆಗೆ ಅಣಿಗೊಳಿಸುವ ಚಿಕಿತ್ಸಕರು.

ಲೋಕಕಲ್ಯಾಣ ಪರವಾದ ಅವರ ಉಪದೇಶದ ನುಡಿಗಳಿಗೆ ಸೋಲದವರಿಲ್ಲ. ಅವರ ಅನುಗ್ರಹ ನುಡಿಗಳು ಸೂಜಿಗಲ್ಲಂತೆ ಆಕರ್ಷಕ. ಭಾರತದ ಗತ ಬದುಕಿನ ಸ್ಥಿತಿಗಳನ್ನು ಸ್ಮರಿಸುತ್ತಾ ಪ್ರಸ್ತುತಕ್ಕೆ ಹೋಲಿಸುವ ಆ ಗಂಭೀರ ಚಿಂತನೆಯ ಧಾಟಿ ಕೇಳುಗರ ಒಳಗಣ್ಣನ್ನು ತೆರೆಯುವಂತೆ ಉತ್ತೇಜನಕಾರಿಯಾಗಿರುತ್ತದೆ. ಸಮ್ಯಕ್ ದೃಷ್ಟಿಯುಳ್ಳ ಪೂಜ್ಯರದು ವಿಚಾರಮಂಡನೆಗಿಂತ ಆಚಾರಕ್ಕೆ ಆದ್ಯತೆ ನೀಡುವಂಥದ್ದು. ಇವರು ಪ್ರಶಾಂತವಾಗಿ ಹರಿವ ನಿರಂತರತೆಯ ಜಲಧಾರೆ. ಮೆಲ್ಲಮೆಲ್ಲನ ಸುರಿವ ಹನಿಗಳು ಮಣ್ಣಿನಾಳಕ್ಕಿಳಿದು ಅಲ್ಲೆಲ್ಲ ತಂಪರಡುತ್ತವೆ. ಧೋಗುಟ್ಟು ಸುರಿವ ನೀರು ತಾನುಬಿದ್ದ ತಾಣವನ್ನೆಲ್ಲ ಕೊಚ್ಚಿಕೊಂಡೇ ಸಾಗುತ್ತದೆ; ಅಲ್ಲೇನೂ ಉಳಿಸದಂತೆ. ಶ್ರೀಗಳ ಬಹುಮುಖ ವ್ಯಕ್ತಿತ್ವ ಧುಮ್ಮಿಕ್ಕಿ ಭೋರ್ಗರೆವ ಜಲಪಾತವಲ್ಲ. ಜುಳುಜುಳು ಸುಸ್ವರನಾದಗೈವ ಪುಣ್ಯ ಸಲಿಲ. ಶ್ರೀಗಳು ಯುಗಪುರುಷರು. ಆದರ್ಶಮುಕುಟರು, ಜನಮಾನಸದಲ್ಲಿ ಅಭಿನಂದನೀಯರು. ಮೈಮನದ ತುಂಬೆಲ್ಲ ತ್ರಿವಿಧ ದಾಸೋಹವನ್ನು ಲೀನವಾಗಿಸಿಕೊಂಡ ಈ ಮಹಾಮಣಿಹದ ಸಮಕಾಲೀನರಾಗಿ ತಾವು ಇರುವುದೇ ನಮ್ಮ ಸುಕೃತ ಫಲ.

ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪವನು ಕಂಪಿಲಲ್ಲದಂತಿರಿಸಿದೆ.
ಶರೀರದೊಳಗೆ ಆತ್ಮನ ಕಾಣದಂತಿರಿಸಿದೆ
ನೀನು ಬೆರೆಸಿದ ಭೇದಕ್ಕೆ ಬೆರಗಾದೆನಯ್ಯಾ ರಾಮನಾಥ !

ಇಲ್ಲಿ ಬರುವ, ನೊರೆವಾಲು, ಮರ, ಶರೀರ ಇವೆಲ್ಲವೂ ಧೃಗ್ಗೋಚರ ಭೌತಿಕ ಸಾಧನಗಳು. ಇವುಗಳ ಅಂತರ್‍ಯದ ಶಕ್ತಿ, ತುಪ್ಪ, ನೊರೆವಾಲು, ಆತ್ಮಗಳು ದೃಷ್ಟಿಗೆ ತೋರವು. ಜೀವಕರ್ಮ ಮತ್ತು ಆತ್ಮ ಧರ್ಮ ಎರಡೂ ಇಲ್ಲಿ ಮೇಳೈಸಿವೆ. ಸೃಷ್ಟಿ ಮತ್ತು ಸೃಷ್ಟೀಶರ ಧರ್ಮಗಳೆರಡನ್ನು ಅರಿಯಲು ಜ್ಞಾನ-ಕ್ರಿಯಾನುಭವಬೇಕು. ಇವೆಲ್ಲವು ಶ್ರೀಗಳ ಸ್ವಪ್ರಜ್ಞೆಗಷ್ಟೇ ವೇದ್ಯವಾಗುವಂಥವು. ಮಾತು ಮನಂಗಳಿಗಾತೀತವಾದ ಇವರ ಅಧ್ಯಾತ್ಮಿಕ ಕ್ರಿಯಾಶೀಲ ಬದುಕಿಗೆ ಅನ್ವಯಿಸುವಂತವು.

ಗ್ರಾಮೀಣ ಬದುಕೆಂದರೆ ಶ್ರೀಗಳ ಹೃದಯ ತುಂಬಿ ಬರುತ್ತದೆ. ಜನಪದರ ಜೀವಂತಿಕೆಯ ಸಾರವಿರುವುದೇ ಅಲ್ಲಿ. ಬಸವ ಜಯಂತ್ಯೋತ್ಸವಗಳು ಸಭೆ ಸಮಾರಂಭಗಳನ್ನು ಭಕ್ತರು ತುಂಬು ಹೃದಯದಿಂದ ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ಆಚರಿಸುವಂಥದ್ದನ್ನು ಎಲ್ಲರೂ ಬಲ್ಲರು. ಶ್ರೀಗಳ ಕೃಪಾಶೀರ್ವಾದದಿಂದ ಅವರ ದಿವ್ಯ ಸಾನ್ನಿಧ್ಯದಲ್ಲಿ ಮೊಟ್ಟ ಮೊದಲಬಾರಿಗೆ ಮಾತನಾಡುವ ಅವಕಾಶವೊಂದನ್ನು ಸಕಲೇಶಪುರ ತಾಲೂಕಿನ ಹುಲ್ಲುಹಳ್ಳಿಯ ಶರಣವೃಂದವು ಕಲ್ಪಿಸಿಕೊಟ್ಟಿತ್ತು. ಅಂದು ಅದೊಂದು ನನ್ನ ಬದುಕಿನ ಶುಭದಿನವೆಂದೇ ಹೇಳಬೇಕು. ಆ ದಿನವನ್ನು ನಾನೆಂದೂ ಮರೆಯಲಾರೆ. ಸಕಲೇಶಪುರ ತಾಲೂಕಿನ ಬಸವ ಜಯಂತಿ ಹಾಗೂ ಆ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾದ ದೇವಾಲಯವೊಂದರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಶರಣ ಬಾಂಧವರು. ಆ ಸಭೆಯ ವೇದಿಕೆಯಲ್ಲಿ ಆಸೀನರಾಗಿದ್ದ ಗುರುಗಳನ್ನು ನಾನು ಆರಂಭದಿಂದಲೂ ಗಮನಿಸುತ್ತಿದ್ದೆ. ಬಹುಶಃ ಎಲ್ಲ ಸಭೆಯಲ್ಲೂ ನನ್ನಂತೆಯೇ ಬಹುಜನರಿಗೆ ಇದು ಅನುಭವವೇದ್ಯ ಎನಿಸುತ್ತದೆ. ಅವರ ಬಾಗಿದ ಶಿರ, ಮುಚ್ಚಿದ ಕಣ್ಣು ಕಂಡು ಬಹುಶಃ ನಿದ್ರಾದೇವಿ ಅವರನ್ನು ಆವರಿಸಿರುವಳೆಂದೇ ಭಾವಿಸಿದ್ದೆ. ನನ್ನ ಮಾತು ಮುಗಿದ ನಂತರವೂ ಅವರ ಭಂಗಿಯಲ್ಲೇನೂ ಬದಲಿರಲಿಲ್ಲ. ಅವರ ದಿಟ್ಟಿಯು ಹಾಗೆಯೇ ಕೆಳಗಿತ್ತು. ಆಗಾಗ್ಗೆ ಕೆಲವು ಹಿರಿಯರು ಮತ್ತು ಭಕ್ತವೃಂದ ಶ್ರೀಗಳ ಬಗ್ಗೆ ಹೀಗೆ ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ. ಈಗಲೂ ಆ ನುಡಿಗಳನ್ನು ಕೇಳುತ್ತಲೇ ಇದ್ದೇನೆ. ಡಾ. ಶ್ರೀ ಶ್ರೀ ಸಿದ್ಧಗಂಗಾ ಶ್ರೀಗಳ ಕಣ್ಣೋಟದ ಕೃಪಾದೃಷ್ಟಿ ನಮ್ಮೆಡೆಗೆ ಕ್ಷಣಮಾತ್ರವೇ ಆಗಲಿ ಬೀರಿತೆಂದರೆ ನಮ್ಮ ಬಾಳು ಸಾರ್ಥಕ ಎಂದು. ಅವರ ದಿವ್ಯದೃಷ್ಟಿಯ ಬಗ್ಗೆ ಭಕ್ತ ಸಮೂಹಕ್ಕೆ ಇಂತಹ ಪೂಜ್ಯ ಗೌರವ ಭಾವನೆ ಉಂಟು. ಆ ಭಾವನೆಯೇ ನನ್ನಲ್ಲೂ ಮೊಳೆತಿದೆ. ಆದರೆ ಗುರುಗಳು ನಿದ್ರೆಗೈದಿದ್ದಾರಲ್ಲ ಎಂದು ತಿಳಿದು ಒಳಗೊಳಗೆ ವ್ಯಥಿಸಿದ್ದೆ. ಆನಂತರ ಕಾರ್‍ಯಕ್ರಮ ಅಂತಿಮಘಟ್ಟಕ್ಕೆ ಬಂದಾಗ ಶ್ರೀಗಳು ಉಪದೇಶಿಸುವ ಸರದಿ ಬಂದಿತು. ಭಕ್ತಿಪೂರ್ವಕವಾಗಿ ಅವರಿಗೆ ಮನದಲ್ಲಿ ನಮಿಸುತ್ತಾ ಮೈಯೆಲ್ಲ ಕಿವಿಯಾಗಿ ಕುಳಿತೆ. ಆಗ ಅರಿವಾಯಿತು ಅವರೊಳಗಿನ ಚಿತ್ತದ ಮಹಿಮೆ. ಅವರ ಮೌನಧ್ಯಾನದೊಳಗಿನ ಶ್ರೋತೃಭಾವಕ್ಕೆ ಬೆಕ್ಕಸ ಬೆರಗಾಗಿದ್ದೆ. ಅಂದಿನ ಸಭೆಯಲ್ಲಿ ಮಾತನಾಡಿದ ಎಲ್ಲರ ಮಾತುಗಳನ್ನು ಕ್ರೋಡೀಕರಿಸಿದ ವಿಶ್ಲೇಷಣಾತ್ಮಕ ವಿವರಣೆ ಅವರು ನೀಡಿದಾಗ ದಂಗಾಗಿ ಹೋಗಿದ್ದೆ. ಈ ರೀತಿ ಸುತ್ತಣ ಏನು ನಡೆದರೂ ನೋಡಿಯೂ ನೋಡದಂತಿರುವ, ಮಾಡಿಯೂ ಮಾಡದಂತಿರುವ ಅದ್ಭುತ ಶಕ್ತಿ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಮಾತ್ರ ಸಾಧ್ಯವಾಗುವ ಮಾತು. ದೇವರ ದಾಸಿಮಯ್ಯ `ಘಟದೊಳಗೆ ತೋರುವ ಸೂರ್‍ಯನಂತೆ. ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು. ಇದ್ದರೇನು? ಸರ್ವರಿಗೆ ಸಾಧ್ಯವಲ್ಲ. ಮುಟ್ಟಿ ಮುಟ್ಟದು. ಅದಕೂಡುವವರೆ ಗುರುವಿನಿಂದಲ್ಲದಾಗದು' ಎಂದು ಗುರು ಮಹಿಮೆಯನ್ನು ಹೊಗಳಿದ್ದಾನೆ. ಆ ಆತ್ಮ ಸಾಕ್ಷಾತ್ಕಾರ, ಆ ಆತ್ಮಬಲ ಶ್ರೀ ಗುರುವಿನಿಂದಲೇ ಸಾಧ್ಯ.

ಸಮಾಜದ ಮೂಲ ಘಟಕ ಕುಟುಂಬವೇ. ಗುರುಗಳು ಸ್ತ್ರೀಪರ ಚಿಂತಕರೂ ಅಹುದು.`ಮಾಯೆಯನ್ನು ಮಹಾದೇವಿ' ಎಂದು ಕರೆದ ಬಸವಣ್ಣನವರ ಕಟ್ಟಾನುಯಾಯಿಗಳು. `ಗೃಹಿಣಿಂ ಗೃಹಮುಚ್ಛತೆ' ಎಂಬ ಮಾತಿನಿಂದ ಗೌರವಿಸಿ ಜತೆಯಲ್ಲೆ ಮಹಿಳಾ ಸಂಕುಲಕ್ಕೂ ಸ್ವಾಭಿಮಾನ, ಆತ್ಮಗೌರವ, ಆರೋಗ್ಯಪೂರ್ಣ ಸ್ವಾತಂತ್ರ್ಯದ ಅರಿವನ್ನು ಎತ್ತಿ ಹಿಡಿಯುತ್ತಾರೆ. ಸಭೆ ಸಮಾರಂಭಗಳಲ್ಲಿ ಮಹಿಳಾ ವ್ಯಕ್ತಿತ್ವಕ್ಕೂ ಆದ್ಯತೆ ನೀಡಿ ಅವರ ಮನೋಸ್ಥೈರ್‍ಯವನ್ನು ಬಲಪಡಿಸುತ್ತಾರೆ. ಹೆಣ್ಣು ಮಕ್ಕಳಿಗೆ ಇರಬೇಕಾದ ವ್ಯಕ್ತಿಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ. ಹೆಣ್ಣು ಹೆಣ್ಣಲ್ಲ. ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲ ಸಿದ್ಧಮಲ್ಲಿಕಾರ್ಜುನ. ನಡುವೆ ನುಳಿವಾತ್ಮ ಹೆಣ್ಣು ಅಲ್ಲ ಗಂಡೂ ಅಲ್ಲ ಆದಾವ ಲಿಂಗ ಎಂದು ನುಡಿದ ಶರಣರ ನುಡಿಗಳನ್ನು ಸಾರ್ಥಕಗೊಳಿಸಿದ್ದಾರೆ. ಶ್ರೀಮಠಕ್ಕೆ ವೈಚಾರಿಕ ಅಭಿರುಚಿ ಆಸಕ್ತಿಯಿರುವ ಮಹಿಳೆಯರನ್ನು ಆಹ್ವಾನಿಸಿ ಅವರ ವಿಚಾರಧಾರೆಗೆ ಅವಕಾಶ ಕಲ್ಪಿಸಿ ಕೊಡುತ್ತಿರುವುದು ಹೊಸದೇನೂ ಅಲ್ಲ. ಇದು ಶ್ರೀ ಶ್ರೀಗಳವರ ಈ ವೈಚಾರಿಕತೆಯ ದ್ಯೋತಕ. ಗುರುಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸ್ತ್ರೀ ಕುಲವೂ ಸಾರ್ಥಕ.

ಮನುಕುಲದ ಯಾರೇ ಆಗಲಿ ಅವರ ಬದುಕು ಸಾರ್ಥಕವಾಗಬೇಕಾದರೆ ಜೀವನದಲ್ಲಿ ಒಂದೊಮ್ಮೆಯಾದರೂ ಕರ್ನಾಟಕ ತವನಿ ತುಮಕೂರಿನ ಶ್ರೀ ಸಿದ್ಧಗಂಗಾ ಕ್ಷೇತ್ರವನ್ನು ದರ್ಶಿಸಬೇಕು. ಸಿದ್ಧಗಂಗಾತಿಲಕ ಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಒಂದರೆಗಳಿಗೆಯಾದರೂ ಇದ್ದು ಬರಬೇಕು. ಆಗ ದೊರಕುವ ಅನಿರ್ವಚನೀಯ ಆನಂದವೇ ಅದ್ಭುತ. ಭಕ್ತಿ ರಸಾನುಭೂತಿ ತಂತಾನೆ ಚಿಮ್ಮುತ್ತದೆ. ದೈವಾಂಶ ಕಳೆಹೊತ್ತ ಆ ಕಾಯದ ಮುಂದೆ ನಾವು ಇಹವನ್ನೇ ಮರೆತುಬಿಡುತ್ತೇವೆ. ಅಂತಹ ಸಾತ್ವಿಕ, ತಾತ್ವಿಕ ದಾರ್ಶನಿಕ ಸಾಹಿತ್ಯ ಸೇವಕ. ವಿಶ್ವಪ್ರೇಮಿ, ಮಹಾಮಾನವ. ಮಾತೃಹೃದಯಿ, ಕರುಣಾ ಬಂಧು, ದಯಾಸಿಂಧು, ಚಿಂತನಶೀಲ, ಅವಿಶ್ರಾಂತ ದುಡಿಮೆಗಾರ, ಶಾಂತ ಸಂಯಮಶೀಲ ಊರ್ದ್ವಮುಖಿಗೆ ಮತ್ತೊಮ್ಮೆ ಭಕ್ತಿಪೂರ್ವಕ ನಮನಗಳು.

ಸುಶೀಲ ಸೋಮಶೇಖರ್‍

ವಿರಶೈವ ಧರ್ಮ, ಹಿಂದು ಧರ್ಮದ ಶಾಖೆ

(ನಾಡಿನ ಹೆಸರಾಂತ ಸಾಹಿತಿ ದೇ. ಜವರೇಗೌಡರು ಸ್ವಾಮೀಜಿ ಜತೆ ನಡೆಸಿರುವ ಸಂದರ್ಶನದ ಯಥಾರೂಪ )
*ಸ್ವಾಮೀಜಿ, ಈ ಕ್ಷೇತ್ರ ಇಷ್ಟೊಂದು ವೈವಿಧ್ಯಮಯವಾಗಿ, ವಿಸ್ತಾರವಾಗಿ, ದೀನದಲಿತರಿಗೆ ಆಸರೆಯಾಗಿ, ವಿದ್ಯಾರ್ಥಿಗಳಿಗಡರ್ಪಾಗಿ ಬೆಳೆಯಬೇಕಾದರೆ ಮಠಕ್ಕೆ ಸಾಕಷ್ಟು ಆಸ್ತಿಯಿರಬೇಕು; ಇಲ್ಲವೆ ನಿಮ್ಮಲ್ಲಿ ಮಂತ್ರದಂಡವಿರಬೇಕು. ಇದಕ್ಕೆ ನೀವು ಏನು ಹೇಳುವಿರಿ?
-ಈ ಮಠಕ್ಕೆ ಭಕ್ತರೇ ಆಸ್ತಿ; ಈಶ್ವರ ಕೃಪೆಯೇ ಅಕ್ಷಯಪಾತ್ರೆ. ನಾನು ನಿಮಿತ್ತ ಮಾತ್ರ. ಅವನೊಲಿದರೆ ಕೊರಡೂ ಕೊನರುತ್ತದೆ. ಬಂಜರು ನೆಲ ಫಲವತ್ತಾಗುತ್ತದೆ. ತಪೋನಿಷ್ಠೆಯಿಂದ, ಕಾಯಕಮಾರ್ಗದಿಂದ ದುಡಿದರೆ ಈಶ್ವರ ತಾನಾಗಿಯೇ ಒಲಿಯುತ್ತಾನೆ.
`ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ, ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ, ಸದ್‌ಭಕ್ತರಿಗೆ ಎತ್ತನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು' ಎಂಬ ಆಯ್ದಕ್ಕಿ ಮಾರಯ್ಯನ ಹೆಂಡತಿ ಲಕ್ಕಮ್ಮನ ಮಾತು ನೀವು ಕೇಳಿಲ್ಲವೆ?

*ಅಂಥ ಸತ್ಯಶುದ್ಧ ಕಾಯಕದಿಂದ, ತಮ್ಮ ಅವಿರತಶ್ರಮದಿಂದ ಇಲ್ಲೊಂದು ಪವಾಡ ಸದೃಶ ಅದ್ಭುತ ನಡೆದಿದೆ ಎಂದು ಇಲ್ಲಿಗೆ ಬಂದವರೆಲ್ಲ ತಿಳಿಯುವುದರಲ್ಲಿ ತಪ್ಪೇನಿದೆ!
-ಅದೇ ತಪ್ಪು, `ಎನ್ನಿಂದಲೇ ಆಯಿತ್ತು, ಎನ್ನಿಂದಲೆ ಹೋಯಿತ್ತು ಎಂಬುವನ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಣ್ಬನೆ ಕೂಡಲಸಂಗಮದೇಔ?' `ಒಡೆಯರಿಗೊಡವೆಯನೊಪ್ಪಿಸುವುದೆ ನೇಮ' ಒಡೆಯರು ಯಾರು? ಶರಣರು, ದೀನ, ದರಿದ್ರರು.'
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ
ಬೇಡಿತ್ತನೀವ ಕೂಡಲಸಂಗಮದೇವಾ.
ಯುಗಪುರುಷ ಬಸವೇಶ್ವರೇ ಹೀಗೆ ಹೇಳಿಕೊಳ್ಳುವಾಗ ನನ್ನ ಅಗ್ಗಳಿಕೆ ಏನಿದೆ? ಇಷ್ಟೆಲ್ಲ ಅಭಿವೃದ್ಧಿ ಹೇಗೆ ಆಯಿತೆಂಬುದೇ ನನಗೆ ಗೊತ್ತಿಲ್ಲ.

*ವೀರಶೈವ ಧರ್ಮವನ್ನು ಹಿಂದೂಧರ್ಮವೆಂದು ಕರೆಯಬಹುದೆ? ಶ್ರೀರಾಮಕೃಷ್ಣ ಸಂಸ್ಥೆ ಹಿಂದೂಧರ್ಮದಿಂದ ಹೊರಬರಲು ನಡೆಸುತ್ತಿರುವ ಪ್ರಯತ್ನ ಸಾಧುವೆ?
-ವೀರಶೈವಧರ್ಮ ಹಿಂದೂಧರ್ಮದ, ಅರ್ಥಾತ್ ಶೈವಧರ್ಮದ ಒಂದು ಶಾಖೆ, ದೈತಾದ್ವೈತ ವಿಶಿಷ್ಟಾದ್ವೈತ ಪಂಥಗಳಿದ್ದಂತೆ ಕ್ರೈಸ್ತರಲ್ಲಿ ಹಲವಾರು ಶಾಖೆಗಳಿದ್ದರೂ, ಎಲ್ಲರೂ ಕ್ರೈಸ್ತರಷ್ಟೆ. ಶಿವ, ಲಿಂಗ, ವಿಭೂತಿ ಮೊದಲಾದ ಕಲ್ಪನೆಗಳು ಹಿಂದೂಧರ್ಮದ ಜನಕುಕ್ಷಿಯಲ್ಲಿವೆ ಎಂಬುದನ್ನು ಮರೆಯಲಾಗದು. ವಿವಿಧಾನಗಳು ಭಿನ್ನವಾಗಿರಬಹುದು. ದೇವರು ಧ್ಯೇಯ ನಂಬಿಕೆಗಳೆಲ್ಲ ಒಂದೆ. ಲಿಂಗಾಯತ ಧರ್ಮವನ್ನು ಶಕ್ತಿವಿಶಿಷ್ಟಾದ್ವೈತ ಪಂಥವೆಂದೂ ಕರೆಯುವುದಂಟು. ಜೈನ, ಬೌದ್ಧ ಧರ್ಮಗಳನ್ನು ವಿಭಿನ್ನ ಮತಗಳೆಂದು ಕರೆಯುವುದಾದರೂ ಹಿಂದೂಧರ್ಮದ ಕಕ್ಷೆಯಿಂದ ಸಿಡಿದು ಹೊರಬಂದುವೆಂಬುದನ್ನು ಮರೆಯಲಾಗದು. ಶ್ರೀರಾಮಕೃಷ್ಣ ಪರಮಹಂಸರು ಹೊಸ ಧರ್ಮವನ್ನು ಸ್ಥಾಪಿಸಲಿಲ್ಲ. ವೇದಾಂತ ಅವರ ಜೀವನದ ಹಾಸುಹೊಕ್ಕಾಗಿತ್ತು. ವಿವೇಕಾನಂದರು ಬದುಕಿದ್ದರೆ, ಹಿಂದೂಧರ್ಮದಿಂದ ಸಿಡಿದು ಹೋಗುವ ಪ್ರಯತ್ನವನ್ನು ತಡೆಗಟ್ಟುತ್ತಿದ್ದರೋ ಏನೊ?

*ಬಸವಣ್ಣ ಚೆನ್ನಬಸವಣ್ಣ ಮೊದಲಾದ ಹನ್ನೆರಡನೆಯ ಶತಮಾನದ ಶರಣರ ಉಪದೇಶವೇ ವೀರಶೈವ ಧರ್ಮದ ಅಡಿಗಲ್ಲಲ್ಲವೆ?
-ಸಂಶಯ ಬೇಕಿಲ್ಲ. ಅನುಭವ ಮಂಟಪ ಪ್ರಾಚೀನಕಾಲದ ಗ್ರೀಕರ ಅಕಾಡೆಮಿಯಂತಿತ್ತು. ನಾಡಿನ ನಾನಾ ಕಡೆಗಳಿಂದ ಬಂದ ಶರಣರು ಅಲ್ಲಿ ಸೇರಿ ಧರ್ಮ ಸಮಾಜಗಳಿಗೆ ಸಂಬಂಸಿದ ವಿಚಾರಗಳ ಮೇಲೆ ಚರ್ಚೆ ನಡೆಸುತ್ತಿದ್ದರು. ಸ್ತ್ರೀಯರು ಸಹ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹಲವು ವಚನಗಳು ಅಲ್ಲಿ ನಡೆದ ಚರ್ಚೆಗಳ ಪರಿಣಾಮವಾಗಿ ಉದ್ಭವಿಸಿರಬೇಕೆಂದು ತೋರುತ್ತದೆ. ಎಲ್ಲೆಡೆಯೂ ರಾಜಷಾಯಿ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಪ್ರಜಾಪ್ರಭುತ್ವ ವಿಧಾನದಲ್ಲಿ, ಸ್ವತಂತ್ರ ವಾತಾವರಣದಲ್ಲಿ ಸಾಮೂಹಿಕ ಪ್ರಜ್ಞೆಯ ಪರಿಣಾಮವಾಗಿ ವೀರಶೈವ ಧರ್ಮ ರೂಪುಗೊಂಡಿದೆ ಎಂಬುದರಲ್ಲಿ ಅನುಮಾನವಿಲ್ಲ.

*ಇಂಡಿಯಾದಲ್ಲಿ ಸೆಕ್ಯೂಲರ್ ಸಿದ್ಧಾಂತ ಜಾರಿಯಲ್ಲಿದೆಯೆ?
-ರಾಜ್ಯಾಂಗದಲ್ಲಿ ಮಾತ್ರ ಅದು ಅಚ್ಚಾಗಿದೆ. ಯಾರೂ ಅದನ್ನನುಸರಿಸುತ್ತಿಲ್ಲ. ರಾಜಕೀಯದಲ್ಲಂತೂ ಜಾತಿಯ ಮೇಲ್ಗೈಯ್ಯಾಗಿದೆ.

*ಹಿಂದೂಧರ್ಮದ ಬಗ್ಗೆ ನಿಮ್ಮ ಅಭಿಪ್ರಾಯವೇನು?
- ಅದು ನಿಜಕ್ಕೂ ವಿಶಾಲವಾದ ಬುಡಭದ್ರವಾಗಿರುವ ಧರ್ಮ. ಬ್ರಾಹ್ಮಣ ಜಾತಿಯೊಡನೆ ಅದರ ಸಮೀಕರಣ ಸರಿಯಲ್ಲ. ಆರ್ಯದ್ರಾವಿಡ ದ್ರಾವಿಡಪೂರ್ವ ಜನಾಂಗಗಳ ವಿಚಾರಗಳು ಸೇರಿ ಆಗಿರುವ ಮುಖ್ಯವಾಗಿ ಉಪನಿಷತ್ತುಗಳ ಆಧಾರದ ಮೇಲೆ ನಲೆಸಿರುವ ಧರ್ಮ ಅದು. ಯಾರೋ ಒಬ್ಬ ವ್ಯಕ್ತಿ ಸರ್ವಾಕಾರ ಮನೋಭಾವದಿಂದ ಜನರ ಮೇಲೆ ಹೊರಿಸಿರುವ ವಿಚಾರಧಾರೆಯಲ್ಲ; ಕಾಲಕಾಲಕ್ಕೆ ಸಂತರು, ಋಷಿಗಳು, ಕೊನೆಗೆ ಕವಿಗಳು ತಂತಮ್ಮ ವಿಚಾರಧಾರೆಯನ್ನು ಹರಿಸಿ, ಚರ್ಚಿಸಿ ರೂಪುಗೊಂಡ, ವಿಕಾಸಗೊಂಡ ಸಾಮೂಹಿಕ ಧರ್ಮ. ವೀರಶೈವಧರ್ಮಕ್ಕೂ ಈ ಮಾತನ್ನು ಅನ್ವಯಿಸಬಹುದು. ಅದು ನಿಂತ ಮಡುವಲ್ಲ, ನಿರಂತರವಾಗಿ ಹರಿಯುತ್ತಿರುವ ಪ್ರವಾಹ.

*ಅನೇಕ ಧರ್ಮಗಳ ಸ್ಪರ್ಧೆ ನಡೆಯುತ್ತಿರುವ, ಸ್ವಾರ್ಥಪರ ರಾಜಕಾರಣಿಗಳು ಅಕಾರ ಲಾಲಸೆಯಿಂದ ದೇಶವನ್ನೇ ಅಡವಿರಲು ಸಿದ್ಧರಾಗಿರುವ, ಕುಟುಂಬ ಯೋಜನೆ ಕೆಲವರಿಗೆ ಮಾತ್ರವೇ ಅನ್ವಯವಾಗುತ್ತಿರುವ, ಮೂಲಭೂತವಾದ ಎಲ್ಲೆಲ್ಲೂ ತನ್ನ ರೆಕ್ಕೆಗಳನ್ನು ಹರಡುತ್ತಿರುವ ಈ ಕಾಲದಲ್ಲಿ ಹಿಂದೂಧರ್ಮಕ್ಕೆ ಅಪಾಯವಿದೆಯೆಂಬ ಶಂಕೆ ಕೆಲವರಲ್ಲಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಅನೇಕ ರಾಜಕಾರಣಿಗಳಿಗೆ ಹಿಂದೂಧರ್ಮದ ಜಾಯಮಾನವೇ ಗೊತ್ತಿಲ್ಲ. ಗೀತೋಪನಿಷತ್ತುಗಳನ್ನು, ವಚನಗಳನ್ನು, ಆಚಾರ್ಯರ ಕೃತಿಗಳನ್ನು ಓದಿಕೊಂಡಿಲ್ಲ. ಪರಧರ್ಮಿಯರಿಗಿಂತ ಮಿಗಿಲಾಗಿ ಅವರ ಅಜ್ಞಾನ ಬೇನಿಷ್ಠೆಗಳಿಂದಾಗಿ ಹಿಂದೂಧರ್ಮಕ್ಕೆ ಧಕ್ಕೆಯೊದಗಿದೆ. ಎಲ್ಲ ಧರ್ಮಗಳ ಗುರಿಯೊಂದೆಯಾಗಿರುವಾಗ, ಎಲ್ಲ ಧರ್ಮಗಳ ಪರಬ್ರಹ್ಮ ಕಲ್ಪನೆಯ ಹಾಗೂ ನೈತಿಕ ಮೌಲ್ಯಗಳ ಆಧಾರದ ಮೇಲೆ ನಿಂತಿರುವಾಗ ಮತೀಯ ಕಲಹಗಳು ಅನಾವಶ್ಯಕ. ಮತೀಯ ಕಲಹಗಳಲ್ಲಿ ತೊಡಗುವವರು ದೈವದ್ರೋಹಿಗಳೆಂದೇ ಹೇಳಬೇಕಾಗುತ್ತದೆ. ರಾಜಕಾರಣಿಗಳು ಏನೇ ಮಾಡಲಿ, ಹಿಂದೂಧರ್ಮವನ್ನು ನಾಶಪಡಿಸಲಾರರು. ಸಾವಿರಾರು ವರ್ಷ ಈ ದೇಶವನ್ನು ವಿದೇಶೀಯರು ಆಳಿದ್ದರೂ ಅದನ್ನು ಕೊಂಕಿಸಲಾಗಿಲ್ಲ. ಒಂದು ಮಾತು ಮಾತ್ರ ನಿಜ. ಹಿಂದೂಧರ್ಮ ಭರತಖಂಡ ವಿನಾ ಬೇರೆಡೆ ತನ್ನ ಬೇರು ಕೊಂಬೆಗಳನ್ನು ಪಸರಿಸಿಲ್ಲ. ಅದು ಇಲ್ಲಿ ಅಳಿಯಿತೆಂದರೆ, ಅದು ಮುಗಿದಂತೆಯೇ ಲೆಕ್ಕ. ಇಸ್ಲಾಂ ಮತ್ತು ಕ್ರೈಸ್ತಧರ್ಮಗಳು ಒಂದು ದೇಶದಲ್ಲಿ ನಿರ್ನಾಮಗೊಂಡರೂ ಬೇರೆ ದೇಶಗಳಲ್ಲಿ ವಿಜೃಂಭಿಸುತ್ತವೆ. ಏಕಮುಖ ಕುಟುಂಬ ಯೋಜನೆಯಾಗಲಿ, ಮೂಲಭೂತವಾದಿಗಳ ಅಂದೋಲನವಾಗಲಿ ಅಪಾಯಕಾರಿ.

*ಸ್ವಾತಂತ್ರ್ಯ ಸಮರದಲ್ಲಿ ನಿಮ್ಮ ಪಾತ್ರವೇನು? ಮಠಗಳು ಸ್ವಾತಂತ್ರ್ಯವನ್ನು ಸ್ವಾಗತಿಸುತ್ತಿದ್ದುದುಂಟೆ?
-ನನಗೆ ತಿಳಿದಮಟ್ಟಿಗೆ ಯಾವ ಮಠವೂ ಸ್ವಾತಂತ್ರ್ಯ ವಿರೋಯಾಗಿರಲಿಲ್ಲ. ನಮ್ಮ ಮಠ ಸ್ವಾತಂತ್ರ್ಯ ಸಮರದಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಪರೋಕ್ಷವಾಗಿ ಸಹಾಯ ಮಾಡುತ್ತಿದ್ದುದುಂಟು. ಹೋರಾಟಗಾರರಿಗೆ ಎಲ್ಲ ಬಗೆಯ ಸಹಕಾರ ನೀಡುತ್ತಿತ್ತು.

*ಜಾತಿ ರಾಜಕೀಯಕ್ಕೆ ಮಠಗಳೂ ಕಾರಣ ಎನ್ನುವ ಮಾತಿದೆ. ಸಿದ್ಧಗಂಗೆಯ ಮಠದ ಬಗ್ಗೆಯೂ ಆ ಅಭಿಪ್ರಾಯವಿದೆಯಲ್ಲ? ಅದು ಸರಿಯೆ?
-ಸೂಕ್ಷ್ಮದ ಪ್ರಶ್ನೆ. ಕೆಲವು ಮಠಗಳ ಬಗ್ಗೆ ಆ ಮಾತು ನಿಜವಿರಬಹುದು, ಇಲ್ಲದಿರಬಹುದು. ಜನಾಭಿಪ್ರಾಯವನ್ನು ನಾನು ಸಂಪೂರ್ಣವಾಗಿ ನಿರಾಕರಿಸಲಾರೆ. ಆದರೆ ನಮ್ಮ ಮಠ ಎಂದೂ ರಾಜಕಾರಣದಲ್ಲಿ ಪ್ರವೇಶಿಸಿಲ್ಲ. ಈ ಮಠ ಕೇವಲ ಲಿಂಗಾಯತರಿಗೆ ಮಾತ್ರವೇ ಮುಡಿಪಲ್ಲ; ಎಲ್ಲ ಜಾತಿಯವರೂ ನಡೆದುಕೊಳ್ಳುತ್ತಾರೆ; ಎಲ್ಲ ಜಾತಿಯವರೂ ನೆರವು ನೀಡುತ್ತಾರೆ. ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ದಾಸೋಹ ಮಂದಿರದ ಬಾಗಿಲು ತೆರೆದಿದೆ. ಎಲ್ಲ ಜಾತಿಯ ರಾಜಕಾರಣಿಗಳೂ, ಶ್ರೀಮಠಕ್ಕೆ ಬರುತ್ತಾರೆ. ಎಲ್ಲರನ್ನು ಹರಸುವುದೇ ನಮ್ಮ ಕರ್ತವ್ಯ. ಪೂರ್ವಗ್ರಹವಾಗಲಿ, ನಿರಾಧಾರವಾದ ಸಂಶಯವಾಗಲಿ ಯಾರಿಗೂ ಒಳ್ಳೆಯದಲ್ಲ. ಸಂಶಯಾತ್ಮಾವಿನಶ್ಯತಿ.

*ಸ್ವಾತಂತ್ರ್ಯೋತ್ತರ ಭಾರತದ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಗಾಂಜಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮವನ್ನು ಕಂಡವರಿಗೆ ತುಂಬ ನಿರಾಶೆಯಾಗುತ್ತದೆ. ಆ ತ್ಯಾಗ, ಆ ಬಲಿದಾನ, ಆ ಕಷ್ಟಸಹಿಷ್ಣುತೆ, ಆ ನೈತಿಕ ಶ್ರದ್ಧೆ, ಆ ಮೌಲ್ಯ, ನಿಷ್ಠೆ ಈಗೆಲ್ಲಿದೆ? ಗಾಂಜಿಯ ಅನುಯಾಯಿಗಳೇ ಅವರು ತೀರಿಕೊಂಡ ನಂತರ ದಾರಿಬಿಟ್ಟರು. ಗಾಂಜಿಯನ್ನು ನೋಡಿಲ್ಲದ, ಅವರ ಕೃತಿಗಳನ್ನರಿಯ ಈಗಿನ ರಾಜಕಾರಣಿಗಳಿಗೆ ಧರ್ಮದ ಭಯವೂ ಇಲ್ಲ, ನೈತಿಕ ಶ್ರದ್ಧೆಯೂ ಇಲ್ಲ. ಜಾತಿಯ ಮೇಲೆ ಜಾತಿಯನ್ನೆತ್ತಿ ಕಟ್ಟಿ, ವ್ಯಕ್ತಿಯ ಮೇಲೆ ವ್ಯಕ್ತಿಯನ್ನೆತ್ತಿಕಟ್ಟಿ, ಅಕಾರ ಗಿಟ್ಟಿಸುವುದೇ, ಸಮಾಜವನ್ನು ಸುಲಿದು ಹಣ ಗಳಿಸುವುದೇ ರಾಜಕಾರಣಿಗಳ ನಿತ್ಯಕರ್ಮವಾಗಿದೆ. ಎಲ್ಲೆಲ್ಲಿಯೂ ಭ್ರಷ್ಟಾಚಾರ, ಅತ್ಯಾಚಾರ, ಅಪಪ್ರಚಾರಗಳು ನಗ್ನ ನೃತ್ಯದಲ್ಲಿ ತೊಡಗಿವೆ. ಗಾಂಜಿ ಇನ್ನೂ ಹತ್ತು ವರ್ಷ ಬದುಕಿದ್ದರೆ, ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಕನಿಷ್ಠ ಹತ್ತು ವರ್ಷ ರಾಜ್ಯಭಾರ ನಡೆಸಿದ್ದರೆ ಇಂಡಿಯಾ ದೇಶದ ಪರಿಸ್ಥಿತಿಯೇ ಬದಲಾಗುತ್ತಿತ್ತು. ಭೂಮಿಯ ಮೇಲೆ ಜನ್ಮಧಾರಣೆ ಮಾಡುವುದು ಬರಿಯ ಕಲಹಕ್ಕಲ್ಲ. ಭೂಮಿ ನೀಡುವ ಸಕಲ ಸೌಕರ್ಯಗಳ ಸುಖವನ್ನನುಭವಿಸುತ್ತ ಪುಣ್ಯಕಾರ್ಯಗಳನ್ನೆಸಗುತ್ತ ಇಲ್ಲಿಯೇ ದೇವರರಾಜ್ಯವನ್ನು ಸಂಪಾದಿಸುವುದಕ್ಕೆಂಬುದನ್ನು ಮನುಷ್ಯ ಅರಿಯಬೇಕು. ಸಹನೆ, ಸಂಯಮ, ವಿವೇಕ, ತ್ಯಾಗ, ನೈತಿಕ ವರ್ತನೆಯ ಮೂಲಕ ಭಗವಂ ದಾನಮಾಡಿರುವ ಭೂಮಿಯನ್ನು ಸ್ವರ್ಗಗೊಳಿಸಬೇಕೇ ಹೊರತು, ಮಾನವ ರಾಕ್ಷಸೀಪ್ರವೃತ್ತಿಯಿಂದ ನರಕಗೊಳಿಸಬಾರದು.

*ಭ್ರಷ್ಟ ರಾಜಕಾರಣಿಗಳಿಂದ ದೇಶ ಅವನತಿಮುಖವಾಗಿರುವ ಕಾಲದಲಿ ಮಠಗಳ ಪಾತ್ರವೇನು?
-ಮೊದಲನೆಯದಾಗಿ ಮಠಗಳು ಧಾರ್ಮಿಕ ಹಾಗೂ ಅಧ್ಯಾತ್ಮಿಕ ಕೇಂದ್ರಗಳು. ರಾಜಕೀಯಸಗಣಿಯಲ್ಲಿ ತೊಡಗಿಕೊಂಡ ಮಠಗಳು ಅಧ್ಯಾತ್ಮಿಕ ಕೇಂದ್ರಗಳಾಗಿ ಉಳಿಯುವುದಿಲ್ಲ. ದೇಶದ ಸಮಾಜದ ಹಿತದೃಷ್ಟಿಯಿಂದ ಮಠಗಳು ಬೀದಿಗಿಳಿಯಬಾರದು. ಅಂದಮೇಲೆ ಭ್ರಷ್ಟಾಚಾರವನ್ನು, ನೈತಿಕ ಪತನವನ್ನು ನೋಡಿಕೊಂಡು ತೆಪ್ಪಗಿರಲಾಗದು. ರಚನಾತ್ಮಕ ಕಾರ್ಯಕ್ರಮಗಳ ಮೂಲಕ, ಉತ್ಸವಗಳ ಮೂಲಕ, ಯುವಕರ ಶಿಕ್ಷಣದ ಮೂಲಕ, ಭಾಷಣ, ಪ್ರವಚನಗಳ ಮೂಲಕ, ವಿಶೇಷವಾಗಿ ಧ್ಯಾನ ಪ್ರಾರ್ಥನೆಗಳ ಮೂಲಕ ಮಾಡಬಹುದೆಂಬ ವಿಶ್ವಾಸ ನನಗಿದೆ.

*ವೈಜ್ಞಾನಿಕ ಯುಗದಲ್ಲಿ ಮತಗಳ ಮತ್ತು ಮತೀಯ ಆಚರಣೆಗಳ ಪಾತ್ರವೇನು?
-ಮೂಲಭೂತ ಸತ್ವನಿಷ್ಠ ತತ್ತ್ವಗಳಿಗೆ ತಿಲಾಂಜಲಿ ನೀಡದೆ ವೈಜ್ಞಾನಿಕ ಮನೋಧರ್ಮವನ್ನೂ ವೈಚಾರಿಕ ಬುದ್ಧಿಯನ್ನೂ ಬೆಳೆಸಿಕೊಳ್ಳಬೇಕಾದ್ದು, ವಿ ನಿಷೇಧ ಆಚರಣೆಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕಾದ್ದು ಎಲ್ಲ ಮತಗಳ ಗುರಿಯಾಗಿರಬೇಕು. ಬದಲಾವಣೆ ಜೀವಂತಿಕೆಯ ಲಕ್ಷಣ.

*ಗಾಂಜಿ ವರ್ಣಾಶ್ರಮಧರ್ಮದ ಬಗ್ಗೆ ರಾಜಿಮಾಡಿಕೊಂಡದ್ದು ಸರಿಯೆ?
-ರಾಜತಂತ್ರದ ದೃಷ್ಟಿಯಿಂದ ಆ ಕಾಲಕ್ಕೆ ಅದು ಅವಶ್ಯವಾಗಿದ್ದಿರಬಹುದು. ಅವರಿಗೆ ಮುಖ್ಯವಾಗಿದ್ದದ್ದು ಸ್ವಾತಂತ್ರ್ಯ ಸಂಪಾದನೆ.

*ಮಠ, ಮತಗಳು ರಾಷ್ಟ್ರದ ಐಕ್ಯಕ್ಕೆ ಭಂಗಕಾರಿಗಳಲ್ಲವೆ?
- ಮೂಲಭೂತವಾದ ಹಾನಿಕಾರಕ ನಿಜ. ಮಠ, ಮತಗಳಲ್ಲಿ ತಪ್ಪು ಹುಡುಕುವುದಕ್ಕಿಂತ ಅವುಗಳ ಜವಾಬ್ದಾರಿ ಹೊತ್ತಿರುವ ಜನರನ್ನ ಕೇಳಬೇಕು. ಒಂದು ರಾಷ್ಟ್ರದ ಐಕ್ಯಕ್ಕೆ ಭಂಗವುಂಟುಮಾಡಬೇಕೆಂದು ಯಾವ ಧರ್ಮದ ಶಾಸ್ತ್ರವೂ ಹೇಳಿಲ್ಲ. ಅದೆಲ್ಲ ದುರಾಶಾಪೀಡಿತ ನೀತಿಭ್ರಷ್ಟರ ಗೈಮೆ.

*ದೇಶದ ಸಮಸ್ಯೆಗಳಿಗೆ ಪರಿಹಾರವೇನು? ಶಿಕ್ಷಣ ಮಂದಿರಗಳಲ್ಲಿಯೂ ಶೋಷಣೆ ನಡೆಯುತ್ತಿರುವುದು ಸರಿಯೆ?
-ಜನಜಾಗೃತಿಯೊಂದೇ ಪರಿಹಾರ. ಅದು ಸಾಧ್ಯವಾಗಬೇಕಾದರೆ ಜಾತಿ, ಲಿಂಗ, ವಯೋಭೇದವಿಲ್ಲದೆ ಎಲ್ಲರೂ ವಿದ್ಯಾವಂತರಾಗಬೇಕು. ಬಡವರಿಗೂ ನಿಲುಕುವ ಶಿಕ್ಷಣವನ್ನು ವ್ಯವಸ್ಥೆಗೊಳಿಸಬೇಕು. ಶಿಕ್ಷಣ ಮಂದಿರಗಳಾಗಲಿ, ದೇವಮಂದಿರಗಳಾಗಲಿ ಸುಲಿಗೆಯ ಅಂಗಡಿಗಳಾಗಬಾರದು.

*ಮಠಗಳು ಕಾರ್ಖಾನೆಗಳ ಸ್ಥಾಪನೆಯಲ್ಲಿ, ಪತ್ರಿಕಾ ಹವ್ಯಾಸದಲ್ಲಿ ತೊಡಗಬಹುದೆ? ಸಿದ್ಧಗಂಗಾ ಸಿಮೆಂಟ್ ಫ್ಯಾಕ್ಟರಿ, ಲೋಕವಾಣಿ ಪತ್ರಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಮಠಗಳ ಹುಟ್ಟುವಳಿ ಹೆಚ್ಚುವುದಾದರೆ, ಆ ಆದಾಯ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ವಿನಿಯೋಗವಾಗುವುದಾದರೆ, ಅದರಿಂದಾಗಿ ಪೂರ್ಣವಾಗಿ ರೂಢಿಸದಿರುವುದೂ, ಅದರ ಪೂರ್ಣ ಪ್ರಯೋಜನವನ್ನು ಪಡೆಯದಿರುವುದೂ ದೇಶದ್ರೋಹವಾಗುತ್ತದೆ. ನೀರಾವರಿಯಾಗುವ ಗದ್ದೆಯನ್ನು ಪಾಳುಗೆಡಹುವುದರಿಂದ ದೇಶಕ್ಕೆ ನಷ್ಟವಾಗುವುದಿಲ್ಲವೆ? ಸಿದ್ಧಗಂಗಾ ಸಿಮೆಂಟ್ ಕಾರ್ಖಾನೆಯಿಂದ ಬರಬಹುದಾದ ಲಾಭದಿಂದ ಮಠದ ಕಾರ್ಯಕ್ಷೇತ್ರವನ್ನು ವಿಸ್ತರಿಸಬಹುದೆಂಬ ಯೋಚನೆಯಿಂದ ಶೇಕಡ ಅರವತ್ತು ಭಾಗ ಷೇರುಗಳನ್ನು ಪಡೆದದ್ದಾಯಿತು. ಆ ಬಗ್ಗೆ ಸಲಹೆ ನೀಡಿದವರೂ ಭಕ್ತರೇ. ಮಠವನ್ನು ನಡೆಸುವವರು ಭಕ್ತರು ತಾನೇ. ಅವರ ಮಾತನ್ನು ಕೇಳದಿರುವುದೆಂತು? ದಾಸೋಹ ಕಾರ್ಯಕ್ಕಾಗಿ ನಾನು ಪಟ್ಟ ಪಡುಪಾಟಿಲು ಅಷ್ಟಿಷ್ಟಲ್ಲ. ಅದು ನಿರ್ವಿಘ್ನವಾಗಿ ನಡೆಯಲೆಂಬ ದೃಷ್ಟಿಯಿಂದ ಆ ಸಾಹಸಕ್ಕೆ ಕೈ ಹಾಕಿದ್ದಾಯಿತು. ಕಾರ್ಖಾನೆ ಸರಿಯಾಗಿ ನಡೆಯಲಿಲ್ಲ ನಷ್ಟವಾಯಿತು, ಬಿಟ್ಟಿದ್ದೂ ಆಯಿತು.

ಲೋಕವಾಣಿ ಪತ್ರಿಕೆಗೆ ಕೈ ಹಾಕಬಾರದಿತ್ತೇನೋ ಎಂದು ಈಗನ್ನಿಸುತ್ತದೆ. ಇಲ್ಲಿಯೂ ಅಷ್ಟೇ. ವೀರೇಂದ್ರ ಪಾಟೀಲರಂಥ ಸಜ್ಜನ ರಾಜಕಾರಣಿಗಳು ಮತ್ತು ಭಕ್ತರು ಬಂದು ಒತ್ತಾಯ ಪಡಿಸಿದರು. ಪತ್ರಿಕೆ ರಾಜ್ಯದ ನಾಲ್ಕನೆಯ ಆಯಾಮ ಅಥವಾ ಆಧಾರಸ್ತಂಭವಾಗಿರುವಾಗ, ದೇಶದ ಗತಿಪ್ರಗತಿಗಳು ಒಳ್ಳೆಯ ಪತ್ರಿಕೆಯನ್ನವಲಂಬಿಸಬೇಕಾಗಿರುವುದರಿಂದ, ನಿಷ್ಪಕ್ಷಪಾತ ದೃಷ್ಟಿಯ ಸತ್ಯನಿಷ್ಠೆಯ ಪ್ರಾಮಾಣಿಕತೆಯ ಆದರ್ಶ ರೀತಿಯ ಪತ್ರಿಕೆಯ ಅಗತ್ಯವಿದೆಯೆಂದು ಮಿತ್ರರು ಹೇಳಿದರು. ಭಕ್ತರ ಮಾತನ್ನು ನಿರಾಕರಿಸುವುದು ಕಷ್ಟ. ಅದರಲ್ಲಿಯೂ ಪ್ರಜಾಪ್ರಭುತ್ವದ ಮಾದರಿಯಲ್ಲಿ ಮಠವನ್ನು ನಡೆಸುತ್ತಿರುವಾಗ ಅದು ನಿಂತುಹೋಯಿತೇ ಹೊರತು ಮಠಕ್ಕೇನೂ ನಷ್ಟವಾಗಲಿಲ್ಲ. ತೇನ ವಿನಾ ತೃಣಮಪಿ ನ ಚಲತಿ.

* ಒಮ್ಮೆ ಶ್ರೀ ನಿಜಲಿಂಗಪ್ಪನವರು ಅನೇಕ ಸ್ವಾಮಿಗಳಿದ್ದ ಸಭೆಯಲ್ಲಿ ಭಾಷಣ ಮಾಡುತ್ತ ಬಂಧುಗಳನ್ನು ಉತ್ತರಾಕಾರಿಗಳನ್ನು ನೇಮಿಸಬಾರದೆಂದು ಹೇಳಿದರು. ಸಲಹೆ ನಿಮಗೆ ಸಮ್ಮತವೆ?
-ಖಂಡಿತ. ಆ ಬಗ್ಗೆ ಸಂದೇಹವೇ ಇಲ್ಲ.

*ದಿನೇ ದಿನೆ ಹೊಸ ಹೊಸ ಮಠಗಳು ಹುಟ್ಟಿಕೊಳ್ಳುತ್ತವೆ. ಸ್ವಾಮಿಗಳ ಸಂಖ್ಯೆ ಹೆಚ್ಚುತ್ತಿದೆ. ಅದರಿಂದ ಪ್ರಯೋಜನವಾಗುತ್ತದೆಯೆ?
-ಅಧ್ಯಾತ್ಮ ಸಾಧನೆ, ಸಮಾಜಸೇವೆಗಾಗಿ ತಲೆಯೆತ್ತುವ ಮಠಗಳಿಗೆ ಮತ್ತು ಸ್ವಾಮಿಗಳಿಗೆ ಸ್ವಾಗತವುಂಟು. ಪ್ರಜೆಗಳಂತೋ ಅಂಥ ನಾಯಕರು; ಭಕ್ರರಂತೋ ಅಂಥ ಸ್ವಾಮಿಗಳು ದೊರೆಕೊಳ್ಳುತ್ತಾರೆ. ಸಾಮಾನ್ಯ ಜನರಿಗಿಂತ ಹೆಚ್ಚಿನ ಸೌಕರ್ಯ, ಸೌಲಭ್ಯಗಳನ್ನು ಸ್ವಾಮಿಗಳಾಗಲಿ, ನಾಯಕರಾಗಲಿ ಅಪೇಕ್ಷಿಸಬಾರದು.

*ಅಡ್ಡಪಲ್ಲಕ್ಕಿ ಚಿನ್ನದ ಕಿರೀಟಗಳನ್ನು ನೀವು ಬಳಸುತ್ತಿಲ್ಲವಲ್ಲ. ಅವು ಮಠಾಪತಿಗಳಿಗೆ ಭೂಷಣವಲ್ಲವೆ? ಜನಾಕರ್ಷಣೆಗೆ ಅವು ಅವಶ್ಯಕವಲ್ಲವೆ?
-ನಮ್ಮ ನಡತೆಯ ಮೂಲಕ, ನಾವು ಮಾಡುವ ಕೆಲಸದ ಮೂಲಕ, ನಮ್ಮ ತಪಶ್ಚರ್ಯೆಯ ಮೂಲಕ, ನಮ್ಮ ಸೇವೆಯ ಮೂಲಕ, ಪ್ರೀತಿಯ ಮೂಲಕ, ವಿದ್ವತ್ತಿನ ಮೂಲಕ ಭಕ್ತರನ್ನು ಆಕರ್ಷಿಸಬೇಕೇ ಹೊರತು ವೇಷಭೂಷಣಗಳಿಂದಲ್ಲ. ನಿಜವಾದ ಸನ್ಯಾಸಿಗೆ ಅವು ಅನಗತ್ಯ. ಆಡಂಬರವಂತೂ ಕೂಡದು. ಅದು ಸನ್ಯಾಸಿಧರ್ಮಕ್ಕೆ ವಿರುದ್ಧವಾದದ್ದು. ಗುರು ಭಕ್ತರ ನಡುವೆ ಆಡಂಬರದ ಸಂಗತಿಗಳು ಕೊಲೆಬಸವನ ವೇಷಭೂಷಣಗಳು ಅಡ್ಡಬರಬಾರದು. ಸ್ವಾಮಿ ವಿವೇಕಾನಂದರು ನಹುಷನಂತೆ ಪಲ್ಲಕ್ಕಿಯಲ್ಲಿ ಹೊರಿಸಿಕೊಳ್ಳುತ್ತಿದ್ದರೆ? ಅವರಿಗೆ ಚಿನ್ನದ ಕಿರೀಟವಿತ್ತೆ? ಅವಿಲ್ಲದೆ ಜನರ ವಿಶ್ವಾಸವನ್ನು ಸಂಪಾದಿಸುವುದೆ ಮಹತ್ತರ ಸಾಧನೆ.

*ನೀವು ವಿದೇಶಕ್ಕೆ ಹೋಗಿದ್ದೀರಾ?
-ಇಲ್ಲ, ನಾನು ಸಾಮಾನ್ಯವಾಗಿ ಕುಟೀಚಕನೆ ಹೊರತು ಬಹೂದಕನಲ್ಲ. ವಿದೇಶಗಳಿಗೆ ಹೋಗುವುದಿರಲಿ, ಇಂಡಿಯಾ ದೇಶದಲ್ಲಿ ಮದ್ರಾಸ್, ಮುಂಬಯಿಗಳಂಥ ಒಂದೆರಡು ಪಟ್ಟಣಗಳನ್ನು ಬಿಟ್ಟು ಕರ್ನಾಟಕದ ಹೊರಗೆ ನಾನು ಹೋಗಿಯೇ ಇಲ್ಲ. ಹೋಗಬೇಕೆಂಬ ಇಚ್ಛೆಯೂ ಇಲ್ಲ. ಇಲ್ಲಿಯೇ ಕೈತುಂಬ ಕೆಲಸವಿರುವಾಗ ದಾಸೋಹ ವ್ಯವಸ್ಥೆಯೇ ನನ್ನ ಸಮಯವನ್ನೆಲ್ಲ ನುಂಗಿಕೊಳ್ಳುತ್ತಿರುವಾಗ ನಾನು ಹೊರಗೆ ಹೋಗುವ ಮಾತೇ ಇಲ್ಲ. ಮೇಲಾಗಿ ನನ್ನ ಮೋಜಿಗಾಗಿ ಮಠದ ಹಣವನ್ನು ವ್ಯಯಮಾಡಲಾರೆ.


ಕೃಪೆ :- ಮಹಾತಪಸ್ವಿ ಪುಸ್ತಕದಿಂದ

ಧರ್ಮಪೀಠಗಳು ನವ ಸಮಾಜ ನಿರ್ಮಿಸಬೇಕು

(ನಾಡಿನ ಹಲವು ಪತ್ರಿಕೆಗಳು, ವಿದ್ವಾಂಸರು, ಸಾಹಿತಿಗಳು ಈವರೆಗೆ ಸ್ವಾಮೀಜಿಯವರನ್ನು ಸಾಕಷ್ಟು ಸಲ ಸಂದರ್ಶಿಸಿದ್ದಾರೆ. ಆ ಎಲ್ಲ ಸಂದರ್ಶನಗಳ ಸಾರ ಇಲ್ಲಿದೆ)
* ಸನ್ಯಾಸ ಧರ್ಮ ಒಪ್ಪಿಕೊಳ್ಳುವ ಸಂದರ್ಭದ ಮನಃಸ್ಥಿತಿ
- ಸನ್ಯಾಸ ಸ್ವೀಕಾರ ಮಾಡಿದ ಮೇಲೆ ಆಚರಣೆ- ಅನುಷ್ಠಾನಗಳನ್ನು ದೋಷರಹಿತವಾಗಿ, ಕಟ್ಟುನಿಟ್ಟಾಗಿ ಪಾಲಿಸಬೇಕಾಗಿತ್ತು. ಆದರೂ ಗುರು ಆಜ್ಞೆ. ಶಿವಯೋಗಿಗಳ ಪ್ರೇರಣೆಯ ವಿನಃ ಬೇರಾವುದೂ ನಮ್ಮ ಮನದಲ್ಲಿರಲಿಲ್ಲ. ಆ ಕ್ಷಣದಲ್ಲಿ ಸಮರ್ಪಿಸಿಕೊಂಡೆವು.

* ಸನ್ಯಾಸಿ ಆಗದೇ ಹೋಗಿದ್ದರೆ, ಬೇರೆ ಬಯಕೆ
- ಅದನ್ನ ಯೋಚನೆ ಮಾಡಿರಲಿಲ್ಲ.

* ನಿರಂತರ ದಾಸೋಹಕ್ಕೆ ಪ್ರೇರಣೆ, ಆರ್ಥಿಕ ಸವಾಲು
- ನಮ್ಮ ಗುರುಗಳು ಮಾರ್ಗದರ್ಶನ ಮಾಡಿದ್ರು. ಅವ್ರು ಹೆಚ್ಚು ಓದಿದವರಲ್ಲ. ಆದರೆ ತಪೋನಿಷ್ಠರಾಗಿದ್ದರು. ಹಣಕಾಸಿನ ತೊಂದರೆ ಇದ್ದೇ ಇತ್ತು. ೧೯೧೭ರಲ್ಲಿ ಅವರು ಸಂಸ್ಕೃತ ಪಾಠಶಾಲೆ ಆರಂಭಿಸಿದಾಗ ಸರಕಾರದಲ್ಲಿ ಕೂಡ ಜಾತ್ಯತೀತ ವ್ಯವಸ್ಥೆ ಇರಲಿಲ್ಲ. ಜಾತಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡುತ್ತಿದ್ದ ಕಾಲ. ಆದರೆ ನಮ್ಮ ಗುರುಗಳು ಎಲ್ಲ ಜಾತಿಯ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಿಕೊಟ್ರು. ಎಲ್ಲ ಸಮಾಜದವರಿಗೂ ಅವಕಾಶ ಕಲ್ಪಿಸಿಕೊಟ್ರು. ಆಗ ಸರಕಾರ ಏನೂ ಗ್ಯ್ರಾಂಟು ಕೊಡ್ತಿರಲಿಲ್ಲ. ಆಮೇಲೆ ಸಂಸ್ಕೃತ ಪಾಠಶಾಲೆಗೆ ಸರಕಾರ ಸಣ್ಣ ಪ್ರಮಾಣದಲ್ಲಿ ಆರ್ಥಿಕ ಸಹಾಯ ಮಾಡಿತು. ೬ ರಿಂದ ೧೮ ವರ್ಷದ ಒಳಗಿನ ಮಕ್ಕಳಿಗೆ ಮತ್ತು ತಂದೆ-ತಾಯಿಗಳು ಇಲ್ಲದಂಥ ಮಕ್ಕಳಿಗೆ ಸರಕಾರ ಆರ್ಫನೇಜ್ ಗ್ಯ್ರಾಂಟ್ ಕೊಡ್ತಿದೆ. ಆ ಗ್ಯ್ರಾಂಟ್ ಕೊಟ್ಟಿದ್ದೂ ಬಹಳ ಕಾಲದ ಮೇಲೆ. ಸಂಸ್ಥೆ ಆರಂಭವಾಗಿ ೨೦ ವರ್ಷಗಳ ಅನಂತರ, ಅದೂ ತುಂಬಾ ಕಡಿಮೇನೇ ಇತ್ತು. ೧೯೩೦ರಲ್ಲಿ ನಮಗೆ ಆಶ್ರಮವಾಯಿತು. ಅನಂತರದಲ್ಲಿ ಸರಕಾರ ಗಮನಿಸುತ್ತ ಬಂತು. ಈ ಸಂಸ್ಥೆ ಪ್ರಾರಂಭವಾದದ್ದು ಝೀರೊ ಪಾಯಿಂಟ್‌ನಿಂದ. ಹಣ ಇರ್‍ಲಿಲ್ಲ. ಯಾವ ಸಹಾಯವೂ ಇರ್‍ಲಿಲ್ಲ. ಜನ ಸಹಾಯ ಮಾಡ್ತಾ ಬಂದ್ರು.

* ಜನಗಳ ನೆರವು
- ಇಲ್ಲ. ಜನರನ್ನ ನಾನು ಕೇಳೋಕ್ಕೆ ಹೋಗಿಲ್ಲ. ಆದ್ರೆ ಅವರೇ ಸ್ವತಃ ಸಂಸ್ಥೆಯ ಸೇವೆ ನೋಡುತ್ತ ಸಹಾಯ ಮಾಡುತ್ತಾ ಬಂದರು. ರೈತಾಪಿ ಜನ ದವಸ, ದಾನ್ಯ ಕೊಡ್ತಾ ಬಂದ್ರು. ಆಗ ಸರಕಾರವೂ ಮುಂದೆ ಬಂತು. ಎಲ್ಲ ಜಾತಿಯ ಜನರೂ ಸ್ಪಂದಿಸಿ ಸಹಾಯ ಮಾಡಿದ್ರು.

*ಪೀಠಾರೋಹಣ ಮಾಡಿದ ಸಂದರ್ಭ, ಘಟನೆ
- ಮಠದೊಂದಿಗೆ ನನಗೆ ಅಷ್ಟೇನೂ ಪೂರ್ವ ಪರಿಚಯ ಇರಲಿಲ್ಲ. ನನ್ನ ವ್ಯಾಸಂಗ ತುಮಕೂರಿನಲ್ಲಾಯ್ತು. ಆಗ ಮೂರು ವರ್ಷ. ನಾನೇ ಸ್ವಂತ ಅಡುಗೆ ಮಾಡ್ಕೊಂಡು ಊಟ ಮಾಡ್ತಾ ವ್ಯಾಸಂಗ ಮಾಡ್ತಿದ್ದೆ(ನಗು). ೧೯೨೭ರಲ್ಲಿ ತುಮಕೂರಿಗೆ ಪ್ಲೇಗ್ ಬಂದಾಗ ಪಕ್ಕದ ಶೆಟ್ಟಿಹಳ್ಳಿಗೆ ಹೋದೆ. ಅಲ್ಲಿಗೂ ಪ್ಲೇಗ್ ಬಂತು. ಆನಂತರ ಬಂದ ಸ್ವಾಮಿಗಳನ್ನು ಕಂಡೆ. ೫೦ ಜನ ಮಾತ್ರ ವಿದ್ಯಾರ್ಥಿಗಳಿದ್ದರು. ಆಗ ಕೊಂಚ ಕಾಲ ಮಠದಲ್ಲಿರಲು ನನಗೂ ಅವಕಾಶ ಕಲ್ಪಿಸಿದರು. ಆಮೇಲೆ ನಾನು ಬಿ.ಎ. ಓದಲು ಬೆಂಗಳೂರಿಗೆ ಹೋದೆ. ಆಗ ಮಠದಲ್ಲಿದ್ದ ಉತ್ತರಾಕಾರಿಗಳು ಆಕಸ್ಮಿಕವಾಗಿ ಲಿಂಗೈಕುರಾದರು. ಅವರ ಅಂತ್ಯ ಸಂಸ್ಕಾರಕ್ಕಾಗಿ ಮಠಕ್ಕೆ ಬಂದಾಗ ನನಗೆ ಆಶ್ರಮವಾಯ್ತು. ತಂದೆ-ತಾಯಿಗಳನ್ನೂ ಕೇಳದೆ, ಗುರುಗಳ ಅಪ್ಪಣೆಯನ್ನು ತತ್‌ಕ್ಷಣ ಒಪ್ಪಿಕೊಂಡೆ. ಆಶ್ರಮವಾದ ಅನಂತರವೇ ಡಿಗ್ರಿ ಪರೀಕ್ಷೆ ಬರೆದೆ.

* ಅನನ್ಯ ಬದುಕಿನ ಮೇಲೆ ಪ್ರಭಾವ ಬೀರಿದ ಹಿರಿಯ ದಾರ್ಶನಿಕರು
- ನಮ್ಮ ಗುರುಗಳ ಮಾರ್ಗದರ್ಶನವೇ ನಮ್ಮ ಮೇಲೆ ಪ್ರಭಾವ ಬೀರಿತು. ಅನಂತರ ಅಭ್ಯಾಸ ಮಾಡುತ್ತ ಬಂದಂತೆ ಬಸವಣ್ಣನವರ ವಚನಗಳ ಅಧ್ಯಯನ ಪ್ರೇರಕ ಶಕ್ತಿಯಾಯಿತು. ಅದು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ನಮ್ಮ ಮೇಲೆ ಪ್ರಭಾವ ಬೀರಿತು. ಜತೆಗೆ ಒಳ್ಳೆಯವರ ಸಹವಾಸ, ಮುಖಂಡರುಗಳ ಒಡನಾಟ, ನಮಗೆ ಕಲಿಸಿದ ಉತ್ತಮ ಬೋಧಕರ ಪ್ರಭಾವ (ಕನ್ನಡಕ್ಕೆ ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿಗಳು; ಇಂಗ್ಲಿಷ್‌ಗೆ ನಂಜುಂಡಯ್ಯ, ಪ್ರೊ.ಸೆಲ್. ಕೆಮಿಸ್ಟ್ರಿಗೆ ಸಂಜೀವರಾವ್, ಪುಟ್ಟಸ್ವಾಮಿ ಅಯ್ಯಂಗಾರ್ ಮುಂತಾದ ಉಪಾಧ್ಯಾಯರಿದ್ದರು)ವಿತ್ತು. ವಾತಾವರಣ ಚೆನ್ನಾಗಿದ್ದ ಕಾರಣ ಯಾವುದೇ ಕೆಲಸ ಹಿಡಿದರೂ ಮುಂದುವರಿಸಲು ಪ್ರಬಲ ಇಚ್ಛಾಶಕ್ತಿಯಿತ್ತು. ಆಗ ಪತ್ರಿಕೆಗಳನ್ನು ಓದುತ್ತಿದ್ದೆವು. ಬಹಳ ವಿಷಯಗಳು ಬರ್‍ತಿದ್ದವು.
ಆಗ ಮಹಾರಾಜರ ಕಾಲ. ಅವರ ಸರಕಾರವಿತ್ತು. ಸ್ವಾತಂತ್ರ್ಯ ಬರೋ ೧೫ ವರ್ಷ ಮುಂಚೆ ನನಗೆ ಆಶ್ರಮವಾಗಿತ್ತು. ಆಗ ರಾಜಕೀಯ ವ್ಯಾಪ್ತಿಯಿತ್ತು. ಮಹಾರಾಜರ ಕಾಲ ಹೋದ ಮೇಲೆ ಅವರೂ ಇಲ್ಲಿಗೆ ಬರ್‍ತಿದ್ರು. ಸ್ವಾತಂತ್ರ್ಯ ಹೋರಾಟಗಾರರೂ ಬರ್‍ತಿದ್ರು. ನೆಹರೂ ತುಮಕೂರಿಗೆ ಬಂದಾಗ ಯಾವ ಭದ್ರತೆಯ ವ್ಯವಸ್ಥೆಯೂ ಇಲ್ಲದೆ ಲೀಲಾಜಾಲವಾಗಿ ಮಕ್ಕಳೊಂದಿಗೆ ಬೆರೆತರು.

* ಅಂದಿನ ಮತ್ತು ಇಂದಿನ ರಾಜಕಾರಣಿಗಳ ನಡುವಿನ ವ್ಯತ್ಯಾಸ
- ವ್ಯತ್ಯಾಸಗಳು ಬಹಳ ಕಾಣುತ್ತಿವೆ. ಆಗಿನವರಲ್ಲಿ ರಾಷ್ಟ್ರ ಭಕ್ತಿ ಇತ್ತು. ರಾಷ್ಟ್ರ ಕಟ್ಟುವ ಮಹತ್ತರವಾದ ಆಕಾಂಕ್ಷೆಯಿತ್ತು. ಸ್ವಾರ್ಥವಿರಲಿಲ್ಲ. ರಾಷ್ಟ್ರ...ರಾಷ್ಟ್ರ..ರಾಷ್ಟ್ರ ಎಂದು ತುರಂಗವಾಸ ಅನುಭವಿಸಿ ಮಹಾತ್ಯಾಗವನ್ನೇ ಮಾಡಿದರು. ಸ್ವಾತಂತ್ರ್ಯ ತರುವ ಉದಾತ್ತವಾದ ಮಹೋತ್ತರ ಧ್ಯೇಯವಿತ್ತು. ನಾವು, ನಮ್ಮ ಕುಟುಂಬ ಅನ್ನೋ ಪ್ರಶ್ನೆಯೇ ಅವರಲ್ಲಿರಲಿಲ್ಲ. ಸ್ವಾತಂತ್ರ್ಯ ಬಂದ ಮೇಲೆ ಸ್ವಾರ್ಥ ಪ್ರವೇಶಿಸಿತು. ಈಗಿನ ರಾಜಕಾರಣಿಗಳ ಬಗ್ಗೆ ಹೇಳೋದಕ್ಕೆ ಸಾಧ್ಯವಾಗುವಂತಿಲ್ಲ (ನಗು). ಆದರ್ಶವಾಗಿರುವವರು ಸಿಗೋದೇ ಕಷ್ಟವಾಗಿದೆ. ಸುಭಾಷ್‌ಚಂದ್ರ ಬೋಸರು ಆಗ ಏನೆಲ್ಲ ಕೆಲ್ಸ ಮಾಡಿದ್ರು... ಮಕ್ಳನ್ನು ಕಂಡ್ರೆ ಓಡ್ಕೊಂಡೇ ಹೋಗ್ತಾ ಇದ್ರು. ಅವ್ರ ಜತೆ ಮಾತಾಡ್ಕೊಂಡು ನಿಂತು ಬಿಡ್ತಿದ್ರು.

* ಧರ್ಮ ಮತ್ತು ರಾಜಕಾರಣ; ಅವುಗಳ ನಡುವಿನ ಸಂಬಂಧ
- ಹೌದು. ದೊಡ್ಡ ಸಮಸ್ಯೆಯಾಗಿದೆ ಅದು. ಮೊದಲು ಧರ್ಮಗುರುಗಳ ವರ್ಚಸ್ಸು, ಪ್ರಭಾವ ರಾಜಮಹಾರಾಜರ ಮೇಲಿತ್ತು. ಅಲ್ಲಿ ಯಾವ ಸ್ವಾರ್ಥವೂ ಇರಲಿಲ್ಲ. ಅವರು ತಿದ್ದತಕ್ಕಂಥ ಪ್ರಭಾವ ಬೆಳೆಸಿಕೊಂಡಿದ್ರು. ಗುರುವಿನ ಅಪ್ಪಣೆ ಮೀರುವಂಥ ಶಕ್ತಿ ಅವರಿಗೆ ಇರ್‍ಲಿಲ್ಲ. ಉದಾತ್ತ ಭಾವನೆಯಿತ್ತು. ಆತ್ಮಶಕ್ತಿ ಸಂಪನ್ನರಾಗಿದ್ದರು. ಬದಲಾವಣೆ ಜಾಸ್ತಿಯಾಗುತ್ತ ಬಂದಂತೆ. ಇತ್ತೀಚೆಗೆ ಮಠಾಪತಿಗಳು, ಧರ್ಮಗುರುಗಳು ತಪೋಶಕ್ತಿ, ಆತ್ಮಶಕ್ತಿಯನ್ನು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ ಪ್ರಗತಿ ಕಾಣುತ್ತಿಲ್ಲ. ಕೆಲವು ಸಮಾಜದವರು ಗುರುಗಳನ್ನು, ನೇಮಕ ಮಾಡಿಕೊಂಡು ಸ್ವಾರ್ಥದ ಮೂಲಕ ಸಮಾಜವನ್ನು ಮುಂದುವರಿಸಬೇಕೆನ್ನುವ ದೃಷ್ಟಿ ಕಾಣ್ತಾ ಇದೆ. ವಾಸ್ತವಿಕವಾಗಿ ಧರ್ಮಪೀಠಗಳು ರಾಜಕೀಯ ಜೀವನದಲ್ಲಿ, ಸಾಮಾಜಿಕ ಜೀವನದಲ್ಲಿ ತಪ್ಪನ್ನು ತಿದ್ದತಕ್ಕ ಪರಿಸ್ಥಿತಿ ಬರಬೇಕು. ಇವತ್ತು ಆ ಶಕ್ತಿಯೂ ಇಲ್ಲ. ಹಾಗಾಗಿ ಅವರೂ ಕೂಡ ಮಾತುಗಳನ್ನು ಕೇಳುತ್ತಿಲ್ಲ. ಗೌರವ ಕೊಡತಕ್ಕ ಒಂದು ಕಾಲವಿತ್ತು. ಧರ್ಮಪೀಠಗಳು ಕೂಡ ತಮ್ಮ ಶಕ್ತಿಯನ್ನು ಕಳೆದುಕೊಳ್ಳುವ ಕಾಲ ಬರುತ್ತಿದೆ. ಜನರೂ ಕೂಡ ಗಮನ ಕೊಡುವುದು ಕಡಿಮೆಯಾಗಿ ಸ್ವಾರ್ಥವೇ ಜಾಸ್ತಿಯಾಗಿದೆ.

* ಅಧ್ಯಾತ್ಮ, ಸಮಾಜ ಸೇವೆ, ಮಾರ್ಗದರ್ಶನ ಮಠಾಪತಿಗಳ ಕರ್ತವ್ಯ...
- ಇವತ್ತಿನ ವಾತಾವರಣದಲ್ಲಿ ಕೆಲವು ಮಠಗಳು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಕೆಲಸ ಮಾಡುತ್ತಿವೆ. ಆದರೂ ರಾಜಕೀಯ ವ್ಯಕ್ತಿಗಳ ಮೇಲೆ ಪ್ರಭಾವ ಬಿರಲು ಸಾಧ್ಯವಾಗುತ್ತಿಲ್ಲ. ಇನ್ನೂ, ತಿಳಿಮಾತನ್ನೇನೂ ಹೇಳಬಹುದು. ಆದರೆ ಅದನ್ನು ಪರಿಪಾಲಿಸುವ ಸನ್ನಿವೇಶವಿಲ್ಲ. ನಾವು ಹೇಳಿದರೆ ವಾತಾವರಣ ಕಲುಷಿತವಾಗಬಹುದು. ಜನರು ಕೆಲಮಟ್ಟಿಗೆ ಪರಿಪಾಲನೆ ಮಾಡುವ ಸಾಧ್ಯತೆ ಇದೆ. ಹೇಳುವಂಥದ್ದನ್ನು ಹೇಳುತ್ತಿದ್ದೇವೆ, ಪ್ರಸ್ತಾವಿಸುತ್ತಿದ್ದೇವೆ. ಅದು ಪ್ರಭಾವ ಬೀರುತ್ತಿಲ್ಲ. ಒತ್ತಾಯ ಮಾಡಲೂ ಸಾಧ್ಯವಾಗುತ್ತಿಲ್ಲ. ಮನಸ್ಸಿಗೆ ನೋವಾಗುತ್ತದೆ. ಸಂಸ್ಥೆಗಳನ್ನು ನಡೆಸುತ್ತಿರುವುದರಿಂದ, ಸಂಸ್ಥೆಗಳ ಹಿತದೃಷ್ಟಿಯಿಂದ ಸತ್ಯಾಂಶಗಳನ್ನು ಹೇಳಹೋದಾಗ ಅದು ಬೇರೆಯೇ ರೂಪ ಪಡೆಯುತ್ತದೆ. ವ್ಯಾವಹಾರಿಕ ನೆಲೆಯಲ್ಲಿ ಕೂಡ ನಮ್ಮ ಮಾತುಗಳನ್ನು ಒಪ್ಪದಿರುವ ಸನ್ನಿವೇಶ ಉಂಟಾಗುತ್ತದೆ.

* ಆಧುನಿಕ ಶಿಕ್ಷಣ, ವ್ಯಾಪಾರೀಕರಣ
- ಶಿಕ್ಷಣ ಕ್ರಮ, ರೀತಿ- ನೀತಿ ಬದಲಾವಣೆಯಾಗಿದೆ. ಎಲ್ಲ ದೃಷ್ಟಿಯಿಂದ ಹಣ ಸಂಪಾದಿಸುವ ದೃಷ್ಟಿ ಬಂದಿದೆ. ಕಲ್ಚರಲ್ ಅಸ್ಪೆಕ್ಟ್ ಬಹಳ ಕಡಿಮೆಯಾಗುತ್ತಿದೆ. ನಿಜವಾದ ವಿದ್ಯೆ ಅನ್ನೋದು ಶಬ್ದ ಬಂದಾಗ ಕೂಡ ಅದನ್ನು ಪಡೆದುಕೊಳ್ಳೋ ಆಸಕ್ತಿ ಕಡಿಮೆ. ವಿದ್ಯಾವಂತರ ಲಕ್ಷಣ ಜ್ಞಾನಾರ್ಜನೆ. ಅದೇ ಕಡಿಮೆಯಾಗಿದೆ. ರ್‍ಯಾಂಕ್ ತಗೋಬೇಕು. ಆಸ್ತಿ ಗಳಿಸಬೇಕು ಅನ್ನೋದೇ ಆಸಕ್ತಿ. ಮೊದಲು ಯಾವಾಗ ಶಿಕ್ಷಣ ಕೊಡುವ ವ್ಯವಸ್ಥೆ ಇರಲಿಲ್ಲವೋ ಆಗ ವೀರಶೈವ ಮಠಗಳು ಮುಂದೆ ಬಂದು ಶಿಕ್ಷಣ ನೀಡುವ ಸೌಕರ್ಯ ಒದಗಿಸಿದವು. ನಮ್ಮ ಸಿದ್ದಾಂತದ ಪ್ರಕಾರ ಬಸವಣ್ಣನವರ ಮಹಾತತ್ವ ಅಂದರೆ ಸಮಾಜವನ್ನು ಸರಿಪಡಿಸುವುದು. ವ್ಯಷ್ಟಿ- ಸಮಷ್ಟಿ ಎರಡೂ ಜತೆಯಾಗಿ ಹೋಗುವ ಸನ್ನಿವೇಶ. ಇತ್ತೀಚೆಗೆ ಸರಕಾರ ನೀಡುವ ಆರ್ಥಿಕ ನೆರವಿನಲ್ಲಿ ಸಂಸ್ಥೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಆಗ ಕೊಮಚ ಮಟ್ಟಿಗೆ ದೇಣಿಗೆ ಪಡೆಯುವುದು ಅನಿವಾರ್‍ಯ. ಆದರೆ ಹಣ ಗಳಿಕೆಯೇ ದುರುದ್ದೇಶವಾಗಬಾರದು. ಸಂಸ್ಥೆಗೆ ಬೇಕಾದಷ್ಟು ಹಣ ಪಡೀಬೇಕು. ಸಂಪಾದನೆ ಮಾಡಬೇಕಾದ್ದು ಉಚಿತವಲ್ಲ.

* ಅನ್ನ ದಾಸೋಹ/ಅಕ್ಷರ ದಾಸೋಹ ತುಮಕೂರಿನಾಚೆ ದಾಟದ ಬಗ್ಗೆ
- ವಿಶೇಷವಾಗಿ ಅತ್ತ ಗಮನ ಕೊಟ್ಟಿಲ್ಲ. ವ್ಯಾವಹಾರಿಕವಾಗಿ, ಭಾವನಾತ್ಮಕವಾಗಿ ಎಷ್ಟು ಬೇಕೋ ಅಷ್ಟು ಇದೆ.

* ಶತಮಾನದ ಅವಿಸ್ಮರಣೀಯ ಘಟನೆ
- ಆ ಬಗ್ಗೆ ವಿಶೇಷವಾಗಿ ಗಮನಿಸಿಲ್ಲ.

*ಸಂತರಿಗೆ, ಮಠಗಳಿಗೆ ಸಂದೇಶ
ಧರ್ಮಪೀಠಗಳು ನವ ಸಮಾಜ ನಿರ್ಮಿಸಬೇಕು. ಸಂತರು ಸಮಾಜ ಕಟ್ಟುವ ಕಾರ್ಯದಲ್ಲಿ ನಿರತರಾಗಬೇಕು.


ಕೃಪೆ-ವಿವಿಧ ಪತ್ರಿಕೆಗಳು

ಸಾಧಕನ ಅನುಭೂತಿಗೆ ಮಾತ್ರ ದಕ್ಕುವ ದೇವರು


`ದೇಶದ ಸಮಕಾಲೀನ ರಾಜಕೀಯ ಸಂಕೀರ್ಣತೆಗೆ ಧಾರ್ಮಿಕ ಮುಖಂಡರ ಮಾರ್ಗದರ್ಶನ ಅತ್ಯಗತ್ಯ. ರಾಷ್ಟ್ರ ಸಮಗ್ರತೆಯ ಜತೆಜತೆಗೇ ಸ್ಥಿರ ಆಡಳಿತದ ಮೂಲಕ ಅಭಿವೃದ್ಧಿ ಸಾಧನೆಯ ದೃಷ್ಟಿಯಿಂದ ಎಲ್ಲ ಮಠಾಶರೂ ಚಿಂತನೆಗಿಳಿಯಲು ಇದು ಸಕಾಲ...'


ತಮಾನ ಕಂಡ ಮಹಾಯೋಗಿ, ತ್ರಿವಿಧ ದಾಸೋಹಿ, ಶ್ರೀ ಸಿದ್ಧಗಂಗಾ ಮಠಾಶ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಅಂತರಾಳದಿಂದ ಹೊರಹೊಮ್ಮಿದ ಈ ಮಾತುಗಳಲ್ಲಿ ಇಂದಿನ ಪ್ರಭುತ್ವ ಪರಂಪರೆ ದಾರಿ ತಪ್ಪುತ್ತಿರುವ ಬಗೆಗೆ ಅಸಮಾಧಾನವಿತ್ತೇನೋ ? ಎಲ್ಲವನ್ನೂ ಮೀರಿ ನಿಂತ ನಿರ್ವಿಕಾರ, ನಿರ್ಲಿಪ್ತ ಮುಖಮುದ್ರೆಯ ಮಹಾನ್ ಸನ್ಯಾಸಿಯ ಭಾವನೆಗಳನ್ನು ಗುರುತಿಸಲಾಗಲಿಲ್ಲ. ಆದರೆ ಧ್ವನಿಯಲ್ಲಿ ಖಚಿತತೆ ವ್ಯಕ್ತವಾಗಿತ್ತು.


`ರಾಜಕಾರಣವೇ ಇಂದು ಸಮಸ್ಯೆಯಾಗಿದೆ. ಗೋಜಲುಗಳಿಂದ ಹೊರಬರಲಾಗದ ಸ್ಥಿತಿಗೆ ಪ್ರಜಾಪ್ರಭುತ್ವವನ್ನು ಕೊಂಡೊಯ್ಯುತ್ತಿದ್ದೇವೆ. ಪ್ರಜ್ಞಾವಂತ ಪ್ರಜೆಗಳು ಮಾತ್ರ ಇದಕ್ಕೆ ಪರಿಹಾರ ರೂಪಿಗಳಾಗಬಲ್ಲರು. ಅಂಥದ್ದೊಂದು ಜಾಗೃತಿಯನ್ನು ನಾಡಿನ ಜನ ಮಾನಸದಲ್ಲಿ ಮಠಾಶರು ಬಿತ್ತಬೇಕಿದೆ...' ನಾಡಿನ ಕುಲಗುರುವಿನ ಅಕಾರಯುತ ಅಭಿಪ್ರಾಯದಂತಿದ್ದವು ಆ ಮಾತುಗಳು.


ನೂರರ ಬೆಳಕಲ್ಲಿ ನಡೆಯುತ್ತಿರುವ ಶತಮಾನೋತ್ಸವ ಸುಸಂದರ್ಭದಲ್ಲಿ ಶ್ರೀಗಳು ನೀಡಿದ ಸಂದರ್ಶನದಲ್ಲಿ, ಧರ್ಮ, ಶಿಕ್ಷಣ, ರಾಜಕೀಯ, ಅರ್ಥವ್ಯವಸ್ಥೆ, ಅಭಿವೃದ್ಧಿ, ಅಧ್ಯಾತ್ಮ ಇತ್ಯಾದಿ ವಿಷಯಗಳ ಬಗೆಗಿನ ತಮ್ಮ ಸುದೀರ್ಘ ಅನುಭವ, ದೂರ ದರ್ಶಿತ್ವ,ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಂಡರು.


ದೇಹ ಬಾಗಿದಂತೆ ಕಂಡರೂ, ಸೈದ್ಧಾಂತಿಕ ನೆಲೆಯಲ್ಲಿ ಇನಿತೂ ಬಗ್ಗುವ ವ್ಯಕ್ತಿತ್ವ ತಮ್ಮದಲ್ಲವೆಂಬುದನ್ನು ಸ್ಪಷ್ಟ ಮಾತುಗಳಲ್ಲಿ ಶ್ರೀಗಳು ನಿರೂಪಿಸಿಬಿಟ್ಟರು. ವಯೋ ಸಹಜವಾಗಿ ಧ್ವನಿ ಕ್ಷೀಣಿಸಿದೆ. ಆದರೆ ಹೇಳಬೇಕಾದುದರಲ್ಲಿ ಸ್ಪಷ್ಟತೆ ಇತ್ತು.


ಮಾತು ಆರಂಭವಾದದ್ದೇ ಆಸ್ತಿಕತೆ, ನಾಸ್ತಿಕತೆಯ ಸಂಘರ್ಷದ ವಿಚಾರದಿಂದ. `ಎರಡರ ನಡುವೆ ಇಂದು ಅತ್ಯಂತ ಸೂಕ್ಷ್ಮ ಪೊರೆಯೊಂದು ಮಾತ್ರವೇ ಉಳಿದುಕೊಂಡಿದೆ' ಎಂದು ವಿಶ್ಲೇಷಿಸಿದ ಸ್ವಾಮೀಜಿ, `ದೇವರ ವ್ಯಾಖ್ಯಾನ ಅತ್ಯಂತ ವಿಶಾಲ ಅರ್ಥವ್ಯಾಪ್ತಿಯನ್ನು ಹೊಂದಿರುವಂಥದ್ದು. ಕಾಲ, ದೇಶದಿಂದ ಅತೀತವಾದ ಇದು ವರ್ಣನೆ ನಿಲುಕದ್ದು. ಸಾಧಕನೊಬ್ಬನ ಅನುಭೂತಿಗೆ ಮಾತ್ರ ದಕ್ಕುವ ದೇವರು ಮಹಾಶಕ್ತಿ ಸ್ವರೂಪಿ. ಅದನ್ನು ಬ್ರಹ್ಮ, ಸರ್ವಜ್ಞ, ಸರ್ವಶಕ್ತ, ಮಹಾ ವಿಜ್ಞಾನಿ- ಹೀಗೆ ಯಾವುದೇ ಹೆಸರಿನಿಂದ ಕರೆದುಕೊಳ್ಳಿ. ಆದರೆ, ಅರ್ಥ ಮಾತ್ರ ಬದಲಾಗದು.' ಸ್ವಾನುಭವವನ್ನೇ ಮಾತುಗಳಲ್ಲಿ ಕಟ್ಟಿಕೊಡುತ್ತಿದ್ದರು ಶ್ರೀಗಳು.


`ನಾನು ದೇವರನ್ನು ಕಂಡಿದ್ದೇನೆ. ಪ್ರತಿದಿನವೂ ಕಾಣುತ್ತಿದ್ದೇನೆ. ಆತನೊಂದಿಗೆ ಮಾತನಾಡುತ್ತಿದ್ದೇನೆ. ನಡೆದಾಡುತ್ತಿದ್ದೇನೆ ' ಸಹಜವಾದ, ಅಷ್ಟೇ ದೃಢವಾದ ಮಾತುಗಳು ಮತ್ತೊಮ್ಮೆ ಪರಮಹಂಸರನ್ನು ನೆನಪಿಸಿತ್ತು. `ಆತನನ್ನು ಎಲ್ಲಿ ಕಂಡಿರಿ ಸ್ವಾಮೀಜಿ ?' ಕುತೂಹಲದ ಪ್ರಶ್ನೆಗೆ ಮುಗುಳ್ನಗೆಯೊಂದಿಗೆ `ಮಕ್ಕಳಲ್ಲಿ' ಎಂದು ಉತ್ತರಿಸಿದರು.


ಹೌದು, ಸಾವಿರಾರು ಮಕ್ಕಳಿಗೆ, ಅವರ ಜೀವನ, ಶಿಕ್ಷಣಕ್ಕೆ ತಾವೇ ಉತ್ತರದಾಯಿಗಳೆಂಬಂತೆ ದಶಕಗಳಿಂದ ಸಿದ್ಧಗಂಗಾ ಮಠದಲ್ಲಿ ಆಶ್ರಯ ನೀಡಿರುವ ಅಕ್ಷರ ದಾಸೋಹಿಗೆ ಅಂಥ ಮುಗ್ಧ ಮಕ್ಕಳ ಮೊಗದಲ್ಲಲ್ಲದೇ ಬೇರೆಲ್ಲಿ ದೇವರು ಕಾಣಲು ಸಾಧ್ಯ ? `ದೇವರ ದಿವ್ಯ ದರ್ಶನದ ಪುಳಕವನ್ನು, ಅದರ ಸಾರ್ಥಕತೆಯನ್ನು ಪ್ರತಿದಿನವೂ ಮಕ್ಕಳಲ್ಲಿ ನಾನು ಕಾಣುತ್ತಿದ್ದೇನೆ' ಎಂಬ ಮಾತು ಇದಕ್ಕೆ ಸಾಕ್ಷಿಯಾಗಿತ್ತು.


ಸಮಾಜವ್ಯವಸ್ಥೆಯನ್ನು ಮೀರಿ, ಎಲ್ಲ ಲೌಕಿಕ ಆಸೆ ಆಮಿಷಗಳನ್ನು ದಾಟಿ ನಿಲ್ಲುವ ಸನ್ಯಾಸಿಯೊಬ್ಬನ ಮನೋಭಾವವನ್ನು ಒಂದೇ ಮಾತಿನಲ್ಲಿ ವಿಷದಪಡಿಸಿದ ಅವರು, ಅದು ಶುದ್ಧಾತಿಶುದ್ಧ ಸಾಧನೆಗೆ ಸಂಬಂಸಿದ ವಿಚಾರವೆಂದುಬಿಟ್ಟರು. ಆದರೆ ಮಠ-ಮಂದಿರ, ಸಾಧು-ಸಂತರೂ ಆರೋಪ, ಅಪವಾದಗಳಿಂದ ಹೊರತಾಗಿಲ್ಲದಿರುವ ಬಗ್ಗೆ ಸಮಾಜ ಸಹಜ ಅಸಹನೆಯನ್ನು ವ್ಯಕ್ತಪಡಿಸಲು ಮಾತ್ರ ಮರೆಯಲಿಲ್ಲ.


`ಈ ಭೂಮಿಯ ಮೇಲೆ ಮಾನವಧರ್ಮವನ್ನುಳಿದು ಬೇರಾವುದೇ ಧರ್ಮ ಶ್ರೇಷ್ಠವಾಗಿರಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗುವುದರಲ್ಲಿ ಅರ್ಥವಿಲ್ಲ. ಸಮಾಜವನ್ನೂ ಸಂಸ್ಕಾರಯುತವಾಗಿ ಪುನರ್ ನಿರ್ಮಿಸುವ ಹೊಣೆಗಾರಿಕೆಯೊಂದಿಗೆ ಮಠಾಶರು ಮುನ್ನಡೆಯಬೇಕು'- ಜಾತಿ, ಉಪಜಾತಿಯ ಹೆಸರಲ್ಲಿ ಪರ್ಯಾಯ ಪೀಠಾಶರು ಹುಟ್ಟಿಕೊಳ್ಳುತ್ತಿರುವ ಕುರಿತಾದ ಪ್ರಶ್ನೆಗೆ ಶ್ರೀಗಳು ನೀಡಿದ ಉತ್ತರವಿದು.


ಮಾತುಕತೆ ಮಠಗಳ ಹೊಣೆಗಾರಿಕೆಯತ್ತ ಹೊರಳಿತು. `ಅಧ್ಯಾತ್ಮದ ನಂತರ ಶಿಕ್ಷಣವೇ ಧಾರ್ಮಿಕ ಸಂಸ್ಥೆಗಳ ಆದ್ಯತೆಗಳಾ ಗಬೇಕು. ಜ್ಞಾನಶಿಸ್ತಿಗೆ ಸಮಾಜವನ್ನು ಸಜ್ಜುಗೊಳಿಸುವ `ಸೇವೆ' ಮಠಗಳಿಂದಾ ಗಬೇಕು. ವಿಜ್ಞಾನ, ಪರಿಸರ, ಅಭಿವೃದ್ಧಿ ಹೀಗೆ ಸಾಮಾಜಿಕ ಆಗುಹೋಗು ಗಳೆಲ್ಲವಕ್ಕೂ ಧಾರ್ಮಿಕ ಮುಖಂಡರು ಸಾಕ್ಷಿಯಾಗುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಅಂಥವುಗಳೊಂದಿಗೆ ತಾನಿರ ಬೇಕಾದ ಅಂತರದ ಪ್ರಜ್ಞೆ, ಔಚಿತ್ಯವನ್ನರಿ ಯುವುದು ಅಗತ್ಯ. ಇದನ್ನು ಧರ್ಮಾಕಾರಿಗಳು ಅರ್ಥ ಮಾಡಿಕೊಂಡರೆ ಸಮಾಜ ಸುಂದರವಾದೀತು.'


ವಿಷಯಗಳು ಸಾಕಷ್ಟಿದ್ದವು, ಅವರೊಂದು ಅನುಭವದ ಖನಿ, ಅನುಭಾವದ ಶಿಖರ, ಮಾನವತೆಯ ಮೂರ್ತಿ, ವಾತ್ಸಲ್ಯದ ಬಿಂಬ, ಅಧ್ಯಾತ್ಮದ ಮೇರು. ಮೊಗೆದಷ್ಟೂ ಮುಗಿಯದ ಜ್ಞಾನ ಸಾಗರ. ಈ ಖನಿಯ ಎದುರು ತುಂಬಿಕೊಳ್ಳುವ ಪಾತ್ರೆ ಹೇಗಿದ್ದರೂ ಚಿಕ್ಕದೇ. ಪತ್ರಿಕೆಯೊಂದರ ಸಮಯ, ಸ್ಥಳ ಸಂಕೋಚದಿಂದಾಗಿ ಸಂದರ್ಶನಕ್ಕೊಂದು ಪೂರ್ಣ ವಿರಾಮ ಹಾಕಲಾಯಿತೇ ವಿನಾ ಆ `ಸಿದ್ಧ'ಪುರುಷ ಸುದ್ದಿಮನೆಗೆ ಬಂದು ಬಿತ್ತಿ ಹೋದ ವಿಚಾರದ ಮೆಲುಕಿಗಲ್ಲ.

ರಾಜಕಾರಣದ ಮುಖ್ಯವಾಹಿನಿಯಲ್ಲಿ ...?
ನೇರ ಪ್ರವೇಶವಲ್ಲದಿದ್ದರೂ, ಧರ್ಮಾಕಾರಿಯ ಸ್ಥಾನದಲ್ಲಿ ನಿಂತು ರಾಜಧರ್ಮವನ್ನು ಬೋಸುವ ಅನಿವಾರ್ಯತೆ ಸೃಷ್ಟಿಯಾಗಿದೆ.



ಶ್ರೀಗಳೆಂದರೆ ನೇರ ನಡೆ, ನುಡಿ


= ಕನ್ನಡ, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ
= ನಿರರ್ಗಳ ಮಾತು
= ಸಂದರ್ಶನಕಾರರ ಆಸಕ್ತಿ ಪರೀಕ್ಷಿಸುವ ಸೂಕ್ಷ್ಮ ಎಚ್ಚರಿಕೆ
= ಸಂದರ್ಶಕ ಬರೆದಿದ್ದನ್ನು ಮತ್ತೆ ಖಚಿತಪಡಿಸಿಕೊಳ್ಳುವ ಜಾಣ್ಮೆ
= ವಿಶ್ವದ ಶ್ರೇಷ್ಠ ದಾರ್ಶನಿಕರ ಸಂದೇಶ ಉದ್ಧರಿಸುವ ಉತ್ಸಾಹ
= ಆಯಾಸಕ್ಕೊಳಗಾಗದ ಪ್ರವೃತ್ತಿ
= ಮಾತಿನ ಮಧ್ಯೆ ವಿಶ್ರಾಂತಿ ಬಯಸದ ಯೌವ್ವನ
= ಧ್ವನಿಯಲ್ಲಿ ಸ್ಪಷ್ಟತೆ, ಖಚಿತ ಪದ
= ಮೌನದಲ್ಲೇ ವಾತಾವರಣದ ಸಮಗ್ರ ಅವಲೋಕನ
= ಪ್ರಶಸ್ತಿ, ಪುರಸ್ಕಾರದ ಮೌಲ್ಯ ಕೆಡುತ್ತಿರುವುದಕ್ಕೆ ವಿಷಾದ ಭಾವ
=ಮಕ್ಕಳು, ಜನರಲ್ಲಿ ದೇವರ ಸಾಕ್ಷಾತ್ಕಾರವೆಂಬ ಸೌಜನ್ಯ


ಜಗದಾನಂದದ ಪರಿ



`Spiritual thinking of scientist take new form of rapturous amazement as universal law which reveals greatest
thinking compared with it all human thinking and acting is negligible reflection'

-ಒಬ್ಬ ವಿಜ್ಞಾನಿಯ ಅಧ್ಯಾತ್ಮ ಚಿಂತನೆ ಉಂಟು ಮಾಡುವ ಜಗದಾನಂದ ಮತ್ತು ಅದು ಹೊರಹಾಕುವ ನಿಬ್ಬೆರಗಾಗಿಸುವ, ಸರ್ವಶ್ರೇಷ್ಠ ವಿಚಾರಧಾರೆಯ ಮುಂದೆ ಸಾಮಾನ್ಯ ಮನುಷ್ಯನ ಚಿಂತನೆ ಹಾಗೂ ವರ್ತನೆಗಳು ತೃಣ ಸಮಾನ.
ಆಸ್ತಿಕತೆ ಮತ್ತು ನಾಸ್ತಿಕತೆಗಳ ನಡುವಿನ ಸಂಘರ್ಷದ ವಿಶ್ಲೇಷಣೆಗಿಳಿದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೇಷ್ಠ ವಿಜ್ಞಾನಿಯೊಬ್ಬನ ಮೇಲಿನ ಈ ನುಡಿಮುತ್ತನ್ನು ಉಲ್ಲೇಖಿಸಿದರು. ದೇವರನ್ನು ಮಹಾವಿಜ್ಞಾನಿಯೆಂದೇ ವ್ಯಾಖ್ಯಾನಿಸಿದ ಅವರು, ವಿಜ್ಞಾನ, ಅಧ್ಯಾತ್ಮಿಕತೆಯ ಮಿಳಿತದ ಫಲವನ್ನು ಈ ನುಡಿಗಟ್ಟಿನ ಮೂಲಕ ಅರ್ಥೈಸಿದರು. ಆದರೆ ಆ ವಿಜ್ಞಾನಿಯ ಹೆಸರು ಮಾತ್ರ ಫಕ್ಕನೆ ಅವರಿಗೆ ನೆನಪಿಗೆ ಬಾರದೇ ಹೋಯಿತು.


ದೃಢ ದೇಹ, ಮೃದು ಮನವಿರಲಿ


ತಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಯಾರು?
ಗುರುಗಳಾದ ತುಮಕೂರಿನ ದಾಬಸ್‌ಪೇಟೆಯ ಶ್ರೀ ಶ್ರೀ ಉದ್ಧಾನ ಶಿವಯೋಗಿಗಳು. ಅವರು ೧೯೧೭ರಲ್ಲೇ ದಾಸೋಹಕ್ಕೆ ನಾಂದಿ ಹಾಡಿದವರು. ನಮ್ಮ ಆಶ್ರಮದ ಹಾಸ್ಟೆಲ್ ಹಾಗೂ ಸಂಸ್ಕೃತ ಪಾಠಶಾಲೆ ಸ್ಥಾಪಿಸಿದವರು. ಅವರೇ ನಮಗೆ ದಾರಿ ದೀಪ.


ತಮ್ಮನ್ನು ಸೆಳೆದ ಪುಸ್ತಕಗಳು?

ಬಸವ ತತ್ತ್ವಗಳು, ರಾಧಾಕೃಷ್ಣನ್, ವಿವೇಕಾನಂದ, ಅರವಿಂದ ಘೋಷ್ ಮುಂತಾದವರ ಜೀವನ ಚರಿತ್ರೆ.

ಜೀವನದ ಸಿಹಿ-ಕಹಿ ಘಟನೆಗಳಾವವು?
ಒಳ್ಳೆಯ ಘಟನೆಗಳೆಲ್ಲ ಸಿಹಿ. ಕೆಟ್ಟ ಘಟನೆಗಳೆಲ್ಲ ಕಹಿ.

ಯುವ ಪೀಳಿಗೆಗೆ ಸಂದೇಶ?
ಮನಸ್ಸು ಮತ್ತು ದೇಹ ಶುದ್ಧವಾಗಿರಲಿ. ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳಿ. ವ್ಯಸನ ತ್ಯಜಿಸಿ, ತ್ಯಾಗ ಮತ್ತು ವಿಶಾಲ ಭಾವನೆ ಬೆಳೆಸಿಕೊಳ್ಳಿ. ಮನಸ್ಸಿನೊಳಗೆ ಪರಿಶುದ್ಧ, ಉದಾತ್ತ ಚಿಂತನೆ ತುಂಬಿರಲಿ.

ಇಂದಿನ ಶಿಕ್ಷಣ ರಂಗಕ್ಕೆ ತಮ್ಮ ಸಲಹೆ?
ಶಿಕ್ಷಣ ಒಂದು ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು.

ಇಂದಿನ ರಾಜಕಾರಣಿಗಳಿಗೆ ನಿಮ್ಮ ಬುದ್ಧಿ ವಾದ?
ಪ್ರಜಾಪ್ರಭುತ್ವ ತತ್ತ್ವಗಳಿಗೆ ಬದ್ಧರಾಗಿರಿ. ಎಂದಿಗೂ ಸರ್ವಾಕಾರಿಯಾಗದಿರಿ. ಪ್ರಗತಿ ಮತ್ತು ಜನಸೇವೆಯೇ ನಿಮ್ಮ ಮೂಲ ಮಂತ್ರವಾಗಿರಲಿ.

ಮಾಧ್ಯಮಗಳು ಹೇಗಿರಬೇಕೆಂದು ಬಯಸುತ್ತೀರಿ?
ಸದಾ ಸಮಾಜಮುಖಿಯಾಗಿ ರಬೇಕು. ಸ್ವಸ್ಥ ಸಮಾಜ ನಿರ್ಮಾಣದ ರೂವಾರಿಯಾಗಬೇಕು.

ಜಾತಿಗೊಂದು ಧರ್ಮಪೀಠ ಅಗತ್ಯವೇ?
ಈ ಬಗ್ಗೆ ಪ್ರತಿಕ್ರಿಯಿಸಲಾರೆ.

*ಧರ್ಮ ಪೀಠಕ್ಕೇರುವ, ಮಠಾಶರಾಗುವ ವ್ಯಕ್ತಿಗಳಿಗೆ `ಅರ್ಹತೆ' ನಿಗದಿಯಾಗಲೇ ಬೇಕು. ಮಾನದಂಡವನ್ನು ಮೀರಿದ ಯಾವುದೇ ಪ್ರಕ್ರಿಯೆ ಸುಸ್ಥಿರವಾಗಲಾರದು...
*ರಾಜಕಾರಣವೇ ದೇಶದ ಬೃಹತ್ ಸಮಸ್ಯೆ. ಇದನ್ನು ಸರಿಪಡಿಸದ ಹೊರತೂ ಉಳಿದೆಲ್ಲ ಅಭಿವೃದ್ಧಿ ಹುಸಿಯಾದೀತು.
*೭೫ ವರ್ಷಗಳ ನನ್ನ ಸನ್ಯಾಸ ಜೀವನದಲ್ಲಿ ಎಂದಿಗೂ ಇದರಿಂದ ಹೊರಬರುವ ಯೋಚನೆಯೂ ಸುಳಿದಿಲ್ಲ. ಅಂಥ ಸಂದರ್ಭಕ್ಕೆ ನನ್ನಲ್ಲಿ ಅವಕಾಶವೇ ಇರಲಿಲ್ಲ.
*ಸುದೀರ್ಘ ಸನ್ಯಾಸ ಪಥದ ಸಾಧನೆ, ತುಂಬು ಜೀವನದ ನಡೆ ಸಂಪೂರ್ಣ ತೃಪ್ತಿ ತಂದಿದೆ.
*`ಭಾರತ ರತ್ನ'ದ ಅಪೇಕ್ಷೆ ಇಲ್ಲ.
*ಶುದ್ಧ ಆಹಾರ-ವ್ಯವಹಾರ, ಶಾಂತ ಪೂಜೆಯೊಂದಿಗೆ ಭಗವದ್ ಸಮರ್ಪಣೆಯೇ ಸುದೀರ್ಘ ಆಯುಸ್ಸು, ದೃಢ ಆರೋಗ್ಯದ ಗುಟ್ಟು.
*ಆಸ್ತಿಕತೆಯನ್ನು ಮೀರಿ ನಾಸ್ತಿಕ ಮನೋಭಾವ ಬೆಳೆಯುತ್ತಿದೆ. ಆದರದು ಶಾಶ್ವತವಲ್ಲ.
*ದೇವರೆಂಬುದು ವರ್ಣನಾತೀತ ಮಹಾ ಶಕ್ತಿ.



ಮಿತಾಹಾರ, ಹಿತ ಚಿಂತನೆ

ಸಿದ್ಧಗಂಗಾ ಶ್ರೀಗಳು ನಿದ್ದೆ ಮಾಡುವುದು ಮೂರೂವರೆ ತಾಸು ಮಾತ್ರ. ಸೇವಿಸುವುದು ಒಂದು ಇಡ್ಲಿ ಅಥವಾ ಒಂದು ಚಪಾತಿ ಇಲ್ಲವೇ ತುಸು ಅನ್ನ ಸಾರು. ತಮ್ಮ ಆರೋಗ್ಯ, ದೀರ್ಘಾಯುಸ್ಸಿನ ರಹಸ್ಯವನ್ನು `ವಿಜಯ ಕರ್ನಾಟಕ'ದ ಸುದ್ದಿಮನೆಯಲ್ಲಿ ಸ್ವತಃ ಅವರೇ ತೆರೆದಿಟ್ಟರು.


ಸಂದರ್ಶನ: ರಾಧಾಕೃಷ್ಣ ಭಡ್ತಿ

ಸಾಧನೆ ಅಪಾರ, ಆದರೂ ಕಾಯಕವೇ ಜೀವಾಳ !


ಎಣ್ಣೆ-ಬತ್ತಿಗೂ ಕಾಸಿಲ್ಲದ ಕಾಲದಲ್ಲಿ ಪೀಠವೇರಿದ ಶ್ರೀಗಳು ಅಪಾರ ಸಾಧನೆ ಮಾಡಿದ್ದರೂ ಕೂಡ ಇವತ್ತಿಗೂ ಕೈಕಟ್ಟಿ ಕುಳಿತಿಲ್ಲ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅವರ ಮಾತಿಗೆ ಪುಷ್ಟಿಕೊಡುವಂತಿದೆ ಶ್ರೀಮಠದ ಶೈಕ್ಷಣಿಕ ಸಾಧನೆಗಳು.



`ಶಿವಕುಮಾರ ಸ್ವಾಮೀಜಿ ಪೀಠಾರೋಹಣ ಮಾಡಿದ ಮೇಲೆ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಯಾವ ಕಾರ್‍ಯವೂ ಸಣ್ಣ ಪ್ರಮಾಣದಲ್ಲಿ ನಡೆಯುವುದೇ ಇಲ್ಲ. ಎಲ್ಲವೂ ಜಗದ್ವಿಖ್ಯಾತ ಕಾರ್‍ಯಕ್ರಮಗಳೇ. ಜಗದ್ವಿಖ್ಯಾತ ದಾಸೋಹ, ಜಗದ್ವಿಖ್ಯಾತ ವಿದ್ಯಾರ್ಥಿ ಸಮೂಹ....' ಎಂಬ ಸ್ಥಳೀಯರ ಮಾತು ಅತಿಶಯೋಕ್ತಿ ಅನ್ನಿಸುವುದಿಲ್ಲ.


ಒಂದು ಕಾಲದಲ್ಲಿ ಕಲ್ಲಿನ ಗುಹೆಯಾಗಿದ್ದ ಶ್ರೀ ಸಿದ್ಧಗಂಗಾ ಕ್ಷೇತ್ರವನ್ನು ವಿಶ್ವವೇ ಅಚ್ಚರಿಯಿಂದ ನೋಡುವ ಮಟ್ಟಕ್ಕೆ ಬೆಳೆಸಿದ್ದರ ಹಿಂದೆ ಶ್ರೀಗಳ ಶ್ರಮವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮಠದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ಕಾಲದಲ್ಲೂ ಶ್ರೀಗಳು ಅಭಿವೃದ್ಧಿ ಯೋಜನೆಗಳಿಗೆ ಹಿಂಜರಿಯಲಿಲ್ಲ. ಸಂಘ, ಸಂಸ್ಥೆಗಳ ಸ್ಥಾಪನೆಯತ್ತ ಮುನ್ನುಗಿದರು ಎಂದರೆ ನಂಬಲು ಸ್ವಲ್ಪ ಕಷ್ಟವಾಗಬಹುದು.


ಹೌದು, ಎಣ್ಣೆ-ಬತ್ತಿಗೂ ಕಾಸಿಲ್ಲದ ಕಾಲದಲ್ಲಿ ಪೀಠವೇರಿದ ಶ್ರೀಗಳು ಅಪಾರ ಸಾಧನೆ ಮಾಡಿದ್ದರೂ ಕೂಡ ಇವತ್ತಿಗೂ ಕೈಕಟ್ಟಿ ಕುಳಿತಿಲ್ಲ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅವರ ಮಾತಿಗೆ ಪುಷ್ಟಿಕೊಡುವಂತಿದೆ ಶ್ರೀಮಠದ ಶೈಕ್ಷಣಿಕ ಸಾಧನೆಗಳು. ೧೯೧೭ರಲ್ಲಿ ಉದ್ದಾನ ಶಿವಯೋಗಿಗಳವರಿಂದ ಸಂಸ್ಕೃತ ಮತ್ತು ವೇದ ಪಾಠಶಾಲೆ ಸ್ಥಾಪನೆಯಾಯಿತು. ಶ್ರೀ ಶಿವಕುಮಾರ ಮಹಾಸ್ವಾಮಿಗಳು ೧೯೩೭ರಲ್ಲಿ ಉದ್ದಾನ ಶಿವಯೋಗಿಗಳ ಸಮ್ಮುಖದಲ್ಲಿ ಅದನ್ನು ಕಾಲೇಜಾಗಿ ಪರಿವರ್ತಿಸಿದರು. ಇಂದು ಸುಮಾರು ೨೫೦೦-೩೦೦೦ ವಿದ್ಯಾರ್ಥಿಗಳು ಈ ಸಂಸ್ಕೃತ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಒಂದೇ ಕಡೆ ಊಟ, ವಸತಿಗಳ ಸೌಕರ್ಯಗಳೊಡನೆ ತರ್ಕ, ವ್ಯಾಕರಣ, ಅಲಂಕಾರ, ಶಕ್ತಿ, ವಿಶಿಷ್ಟಾದ್ವೈತ ವೇದಾಂತ ವಿಭಾಗಗಳಲ್ಲಿ ವಿದ್ವತ್ ಮಟ್ಟದವರೆಗೆ ಓದಲು ಅವಕಾಶ ಕಲ್ಪಿಸಿಕೊಡಲಾಗಿದೆ.


ಜತೆಗೆ ಕನ್ನಡ ಪಂಡಿತ ಪರೀಕ್ಷಾ ವಿಭಾಗವೂ ಈ ಸಂಸ್ಕೃತ ಕಾಲೇಜಿನ ಅಂಗವಾಗಿ ಉದಯಗೊಂಡಿದೆ. ಮೈಸೂರಿನ ಕನ್ನಡ ಪಂಡಿತ ಬಿ.ಎ ಇಂಟಿಗ್ರೇಟೆಡ್ ಶಾಲೆಯನ್ನು ಸರಕಾರ ಮುಚ್ಚಿದೆ. ಹೀಗಾಗಿ ಇಲ್ಲಿನ ಕನ್ನಡ ಪಂಡಿತ ಪರೀಕ್ಷಾ ವಿಭಾಗ ಇಡೀ ರಾಜ್ಯವನ್ನು ಪ್ರತಿನಿಸುತ್ತಿದೆ. ನೂರಾರು ಪಂಡಿತರನ್ನು ರಾಜ್ಯದ ಹೈಸ್ಕೂಲು ಶಿಕ್ಷಕ ಸ್ಥಾನಕ್ಕೆ ಒದಗಿಸಿದೆ. ಜೂನಿಯರ್ ಕಾಲೇಜು, ಹೈಸ್ಕೂಲ್, ಸಂಗೀತ ಶಿಕ್ಷಣ ಶಾಲೆ, ಕುರುಡರ ಶಾಲೆ, ಉಪಾಧ್ಯಾಯ ತರಬೇತಿ ಕೇಂದ್ರ (ಟಿ.ಸಿ.ಎಚ್.), ಜ್ಯೋತಿಷ್ಯ ಪಾಠಶಾಲೆ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ...ಮೊದಲಾದವುಗಳಿಗೆ ಶ್ರೀ ಮಠ ಆಶ್ರಯ ತಾಣವಾಗಿದೆ. ಇಲ್ಲಿನ ವಿದ್ಯಾರ್ಥಿಗಳೆಲ್ಲ ಶ್ರೀ ಮಠದಲ್ಲಿಯೇ ವಸತಿಯ ಸೌಕರ್‍ಯ ಹೊಂದಿದ್ದಾರೆ. ಶ್ರೀಗಳವರು ಖುದ್ದಾಗಿ ಈ ಮಕ್ಕಳನ್ನೆಲ್ಲ ಪಾಲನೆ ಪೋಷಣೆ ಮಾಡುತ್ತಾರೆ. ತೀಡಿ, ತಿದ್ದುತ್ತಾರೆ.


ಉದ್ದಾನ ಶಿವಯೋಗಿಗಳವರ ಕಾಲದಲ್ಲಿ, ಅಂದರೆ ೧೯೪೦-೪೧ರಲ್ಲಿ ಈ ಕ್ಷೇತ್ರದ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೬೦ ಮಾತ್ರ ಇತ್ತು. ಕಾಲಕಾಲಕ್ಕೆ ಆ ಸಂಖ್ಯೆ ಗಣನೀಯವಾಗಿ ಬೆಳೆದು, ಇಂದು ಆ ಸಂಖ್ಯೆ ಸುಮಾರು ೮ಸಾವಿರಕ್ಕೆ ಏರಿದೆ. ತುಮಕೂರಿನಲ್ಲಿ ೧೯೪೪ರಲ್ಲಿಯೇ ಆರಂಭವಾದ ಸಿದ್ಧಗಂಗಾ ಹೈಸ್ಕೂಲ್, ಆವತ್ತಿನಿಂದ ಈವರೆಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.
ವಿದ್ಯಾಭ್ಯಾಸ ಕೇವಲ ನಗರ ಪ್ರದೇಶಕ್ಕೆ ಸೀಮೀತವಾಗಬಾರದು. ಹಳ್ಳಿ ಮೂಲೆಯಲ್ಲೂ ಶಾಲೆಗಳು ಆರಂಭವಾಗಬೇಕು ಎಂಬ ಸಂಕಲ್ಪದೊಂದಿಗೆ ಶ್ರೀಗಳು ಶೈಕ್ಷಣಿಕ ಕ್ರಾಂತಿಗೆ ಕೈ ಹಾಕಿದರು. ೧೯೬೨ರಿಂದಲೇ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆ ಆರಂಭಿಸಲು ಶುರುವಿಟ್ಟರು. ಹೌದು, ಅದೊಂದು ಕ್ರಾಂತಿಯೇ ಸರಿ. ಅದರ ಫಲವೆಂಬಂತೆ ಇವತ್ತು ೫೫ ಪ್ರೌಢ ಶಾಲೆಗಳಿಗೆ ಮಠ ಆಸರೆಯಾಗಿದೆ.


ಜಾತಿ ಮತದ ಭೇದವಿಲ್ಲ...
ಶ್ರೀ ಮಠದ ಯಾವೊಂದು ವಿದ್ಯಾಸಂಸ್ಥೆಗೂ ಈವರೆಗೆ ಜಾತಿಯ ಸೋಂಕು ತಟ್ಟಿಲ್ಲ. ಇಲ್ಲಿನ ವಿದ್ಯಾರ್ಥಿಗಳನ್ನು ಯಾವ ಜಾತಿಯವರು ಎಂದು ಪ್ರಶ್ನಿಸುವ ಪ್ರಮಯವೇ ಬರುವುದಿಲ್ಲ. ಬಹುಶಃ ಅದೇ ಕಾರಣಕ್ಕಾಗಿ ಶ್ರೀಕ್ಷೇತ್ರ ಇವತ್ತು ಸಮಾಜದಲ್ಲಿ ಒಂದು ಸ್ಥಾನ ಗಳಿಸಿರಬಹುದು. ೧೯೮೦ರಲ್ಲಿ ೪೨ ಜಾತಿಯ ೩೮೦೦ ವಿದ್ಯಾರ್ಥಿಗಳಿಗೆ ಮಠ ಆಶ್ರಯ ನೀಡಿರುವುದು ಇವತ್ತಿಗೂ ದಾಖಲೆಯಾಗಿಯೇ ಉಳಿದಿದೆ. `ಅನ್ನ ದಾಸೋಹ, ಜ್ಞಾನ ದಾಸೋಹಗಳು ಮಾತ್ರ ಮಠದ ಗುರಿ ಹೊರತು ಒಂದು ಜಾತಿಯನ್ನು, ಪಂಗಡವನ್ನು ನಿರ್ಮಿಸುವುದು ನಮ್ಮ ಧ್ಯೇಯವಲ್ಲ' ಎಂಬ ಶ್ರೀಗಳ ಮಾತನ್ನು ಮಠದ ಎಲ್ಲ ಸಂಸ್ಥೆಗಳು ಆಜ್ಞೆಯನ್ನಾಗಿ ಸ್ವೀಕರಿಸಿವೆ.


ಶ್ರೀ ತೋಂಟದಾರ್ಯ ವಿದ್ಯಾರ್ವನೀ ಸಭಾ
ಶೈಕ್ಷಣಿಕ ಸಂಸ್ಥೆಗಳ ಜತೆಗೆ ಹತ್ತು ಹಲವು ಸಂಘಗಳ ತವರುಮನೆಯಾಗಿ ಮಠ ಕಾರ್ಯನಿರ್ವಹಿಸುತ್ತಿದೆ. ಅಂತಹ ಸಾಲಿನಲ್ಲಿ ಸಿಗುವುದು ೧೯೩೮ರಲ್ಲಿ ಸ್ಥಾಪಿತವಾದ ಈ ಸಂಘ. ವಿದ್ಯಾರ್ಥಿಗಳಿಗಾಗಿ ರೂಪಿತವಾಗಿರುವ ಈ ಸಂಘದಲ್ಲಿ ಲೇಖನ, ಭಾಷಣ, ಕಾವ್ಯವಾಚನ, ವಚನ ಸ್ಪರ್ಧೆಗಳನ್ನೇರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಸೂಕ್ತ ರೀತಿಯಲ್ಲಿ ಅರಳಿಸಲು ಪ್ರಯತ್ನ ನಡೆಯುತ್ತಿದೆ.


ಶ್ರೀ ಸಿದ್ಧಲಿಂಗೇಶ್ವರ ನಾಟಕ ಮಂಡಳಿ
ಗುಬ್ಬಿ ವೀರಣ್ಣನಂಥ ಕಲಾವಿದರಿಗೆ ಜನ್ಮಕೊಟ್ಟ ಊರಲ್ಲಿ ಒಂದು ನಾಟಕ ಮಂಡಳಿ ಇಲ್ಲದೇ ಹೋದರೆ ಹೇಗೆ ಸ್ವಾಮಿ? ಅನ್ನುವವರಿಗೆ ಉತ್ತರವೆಂಬಂತೆ ಮಠದ ಆವರಣದಲ್ಲಿ ನಾಟಕ ಮಂಡಳಿಯೊಂದು ಅರಳಿದೆ. ಪ್ರತಿಭಾವಂತರಾದ ಅಧ್ಯಾಪಕ, ಸಿಬ್ಬಂದಿ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕಲೆಯನ್ನು ಸದುಪಯೋಗಮಾಡಿಕೊಳ್ಳುವ ದೃಷ್ಟಿಯಿಂದ ಜನ್ಮ ತಾಳಿದ ಈ ಮಂಡಳಿ ಶ್ರೀಮಠದ ಜಾತ್ರೆಯ ಕಾಲದಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ಅನೌಪಚಾರಿಕ ಶಿಕ್ಷಣ ಪ್ರಸಾರದಲ್ಲಿ ಮಹತ್ವದ ಪಾತ್ರವಹಿಸಿದೆ.


ಜನರಲ್ಲಿ ಧಾರ್ಮಿಕ ಹಾಗೂ ರಾಷ್ಟ್ರೀಯ ಮನೋಭಾವವನ್ನು ರೂಢಿಸಲು ಶ್ರಮಿಸುತ್ತಿದೆ. ಮಂಡಳಿಯಿಂದ ಪ್ರದರ್ಶಿತವಾಗಿರುವ ಭಕ್ತ ಮಾರ್ಕಂಡೇಯ, ಎಚ್ಚಮ ನಾಯಕ, ರಾಜಶೇಖರ ವಿಲಾಸ ಮತ್ತು ಜಗಜ್ಯೋತಿ ಬಸವೇಶ್ವರ ನಾಟಕಗಳು ಜನ ಮಾನಸದಲ್ಲಿ ಅಚ್ಚಾಗಿಬಿಟ್ಟಿವೆ. ಅದರಲ್ಲೂ ಜಗಜ್ಯೋತಿ ಬಸವೇಶ್ವರ ನಾಟಕವಂತೂ ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ೭೨೭ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಮಂಡಳಿ ಪರಿಪೂರ್ಣ ಸ್ವಾವಲಂಬಿಯಾಗಿದ್ದು ರಂಗ ಸಲಕರಣೆಗಳನ್ನು ಹೊಂದಿದೆ.


ಶ್ರೀ ಸಿದ್ಧಲಿಂಗೇಶ್ವರ ಹಾಗೂ ಶ್ರೀ ಸಿದ್ಧಗಂಗಾ ಪ್ರಕಾಶನ
ಸಾಹಿತ್ಯ ಪ್ರಕಾಶನ ಕ್ಷೇತ್ರದಲ್ಲೂ ಶ್ರೀಮಠದ ಪಾಲಿದೆ. ಧಾರ್ಮಿಕ, ಅಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವಿಚಾರಗಳನ್ನೊಳಗೊಂಡ ಗ್ರಂಥಗಳನ್ನು ಪ್ರಕಟಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಈ ಪ್ರಕಾಶನ 'Sri Basaveswara and his contemporaries' ಎಂಬ ಇಂಗ್ಲಿಷ್ ಗ್ರಂಥ ಮತ್ತು ಅದರ ಕನ್ನಡಾನುವಾದ `ಶ್ರೀ ಬಸವೇಶ್ವರ ಮತ್ತು ಅವರ ಸಮಕಾಲೀನರು' ಎಂಬುದನ್ನೂ, `ಸುಭಾಷಿತ ಕುಸುಮಾಂಜಲಿ' ಎಂಬ ಸಂಕಲನ ಗ್ರಂಥವನ್ನೂ `ಕರ್ಮಯೋಗಿ ಸಿದ್ಧರಾಮ' ಎಂಬ ನಾಟಕ ಮತ್ತು `ಪೌರುಷ ಪಾಂಚಜನ್ಯ' ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದೆ. ಶ್ರೀ ಸಿದ್ಧಗಂಗಾ ಪ್ರಕಾಶನದ ಹೆಸರಿನಲ್ಲಿ `ಕರ್ತಾರನ ಕಮ್ಮಟ', `ಶಿವಯೋಗಿ ಉದ್ದಾನ ಯತೀಶ್ವರ ', `ವಚನಗಂಗಾ' ಮತ್ತು `ವಚನಬಿಲ್ವ' ಶಟಸ್ಥಲಶಿಲ್ಪಿ ಚನ್ನಬಸವಣ್ಣ ಕೃತಿಗಳನ್ನು ಪ್ರಕಟಿಸಿದೆ.


ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ
ಶ್ರೀ ಮಠದ ಆಶ್ರಯ ಪಡೆದು ವಿದ್ಯಾವಂತರಾಗಿ ದೇಶ ವಿದೇಶಗಳ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಹಸ್ರಾರು ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ಮಾತೃಸಂಸ್ಥೆಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ೧೯೫೪ನೇ ಅಕ್ಟೋಬರ್ ೪ ರಂದು ಈ ಸಂಘವನ್ನು ಸ್ಥಾಪಿಸಲಾಯಿತು.


ಅಂದಿನಿಂದ ಸಂಘವು ಪ್ರಗತಿಪಥದಲ್ಲಿ ಮುನ್ನಡೆದು ಗಣನೀಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿದೆ. ಜಾತ್ರೆಯ ಕಾಲದಲ್ಲಿನ `ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ` ಈ ಸಂಘದ ಕೊಡುಗೆಯಾಗಿದೆ. ಸಿದ್ಧಗಂಗಾ ಮಾಸಪತ್ರಿಕೆ ಕೂಡ ಸಂಘದ ಕೊಡುಗೆಯೇ. ಶ್ರೀ ಶ್ರೀಗಳವರ ಪೀಠಾರೋಹಣ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪ್ರಕಟಿಸಿದ `ಸಿದ್ಧಗಂಗಾಶ್ರೀ' ಬೃಹತ್ ಅಭಿನಂದನಾ ಗ್ರಂಥದಲ್ಲಿ ಸಂಘದ ಪಾಲು ಅಪಾರ. ಇನ್ನು ವಜ್ರಮಹೋತ್ಸವದ ಸಂಸ್ಮರಣವಾಗಿ ಮೂಡಿಬಂದ `ದಾಸೋಹ ಸಿರಿ' ಮಹಾಸಂಪುಟ ಪ್ರಕಟಣೆಯೂ ಸಂಘದ ಸೇವೆಗೆ ಸಾಕ್ಷಿಯಾಗಿದೆ. ಬೆಂಗಳೂರು, ಮೈಸೂರುಗಳಲ್ಲಿರುವ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಈ ಸಂಘದ ಶಾಖೆ ಸ್ಥಾಪಿಸಿದ್ದಾರೆ.


ಸಿದ್ಧಗಂಗಾ ಮಾಸಪತ್ರಿಕೆ
ಇದು ಶ್ರೀಮಠದ ಮುಖವಾಣಿ. ಆದರೂ ಧಾರ್ಮಿಕ ಶಿಕ್ಷಣ ಪ್ರಸಾರ, ಸಾಮಾಜಿಕ ಆರೋಗ್ಯ, ನೈರ್ಮಲ್ಯಗಳ ಸಾಧನೆಯೇ ಪತ್ರಿಕೆಯ ಜೀವಾಳ. ೧೯೬೫ರಲ್ಲಿ ತ್ರೈಮಾಸಿಕವಾಗಿ ಪ್ರಾರಂಭವಾದ `ಸಿದ್ಧಗಂಗಾ' ನಂತರ ಮಾಸಿಕವಾಗಿ ಮುನ್ನಡೆದು ಬೆಳ್ಳಿಹಬ್ಬ ಆಚರಿಸುವ ಉತ್ಸಾಹದಲ್ಲಿದೆ. ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರಶಸಿಯನ್ನೂ ಗಳಿಸಿದೆ. ಅಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೇಖನಗಳ ಜತೆಗೆ ಪೂಜ್ಯ ಶ್ರೀಶ್ರೀಗಳವರ ಶ್ರೀವಾಣಿಯೊಂದಿಗೆ, ಶ್ರೀಗಳವರ ಕಾರ್ಯಕ್ರಮಗಳ ಪರಿಚಯದೊಂದಿಗೆ, ಶ್ರೀ ಕ್ಷೇತ್ರವಾರ್ತೆಯನ್ನೊಳೊಂದಿಗೆ ಪ್ರತಿ ತಿಂಗಳೂ ಪ್ರಕಟವಾಗುತ್ತಿದೆ.


ವಸ್ತು ಪ್ರದರ್ಶನ
ಶಿವರಾತ್ರಿಯ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಕಾಲದಲ್ಲಿ ೧೫ ದಿನಗಳ ಕಾಲ ಈ ವಸ್ತು ಪ್ರದರ್ಶನ ನಡೆಯುತ್ತದೆ. ಈ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ನಾನಾ ಇಲಾಖೆಗಳು ಹಾಗೂ ಖಾಸಗಿ ಉದ್ಯಮಿಗಳೂ ತಮ್ಮ ಸಂಸ್ಥೆಗಳ ಮಳಿಗೆಗಳನ್ನೂ ಇಡುತ್ತಾರೆ.


ಆಚರಣೆ ಹಾಗೂ ಸಮ್ಮೇಳನಗಳು
ಅಧ್ಯಾತ್ಮದ ಜತೆಗೆ ಸಾಹಿತ್ಯದ ಘಮವೂ ಇದೆ, ವಿಜ್ಞಾನದ ಲೇಪವೂ ಇದೆ ಎಂಬುದಕ್ಕೆ ಸಾಕ್ಷಿಯಾಗಿರುವುದು ಮಠದಲ್ಲಿ ನಡೆದಿರುವ, ನಡೆಯುತ್ತಿರುವ ಶಿಬಿರ, ಸಮ್ಮೇಳನಗಳು. ೧೯೬೩ರಲ್ಲಿ ಪ್ರಸಿದ್ಧ ವಿದ್ವಾಂಸರಾದ ಡಾ. ರಂ. ಶ್ರೀ ಮುಗಳಿ ಅವರ ಅಧ್ಯಕ್ಷತೆಯಲ್ಲಿ ೪೪ನೇ ಕನ್ನಡ ಸಾಹಿತ್ಯ ಸಮ್ಮೇಳನವು ನಡೆದಿದೆ. ೧೯೬೪ರಲ್ಲಿ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನ ಹಾಗೂ ೧೯೭೬ರಲ್ಲಿ ಅಖಿಲ ಕರ್ನಾಟಕ ದ್ವಿತೀಯ ಸಂಸ್ಕೃತ ಸಮ್ಮೇಳನ ಜರುಗಿದೆ. ೧೯೮೫ರಲ್ಲಿ ಇಲಕಲ್ ಶ್ರೀ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದ ಶರಣ ಸಿದ್ಧಾಂತ ವಿದ್ಯಾಪೀಠದ ವತಿಯಿಂದ ಒಂದು ವಾರದ ಶಿವಾನುಭವ ತರಬೇತಿ ಶಿಬಿರ ನಡೆದಿತ್ತು. ಜತೆಗೆ ಪ್ರತಿವರ್ಷ ಸಂಕ್ರಾಂತಿಯಂದು ಪರಮಪೂಜ್ಯ ಶ್ರೀ ಆಟವೀಸ್ವಾಮಿಗಳ ಹಾಗೂ ಪರಮಪೂಜ್ಯ ಶಿವಯೋಗಿ ಶ್ರೀ ಉದ್ದಾನಸ್ವಾಮಿಗಳ ಪುಣ್ಯಾರಾಧನೆ ಹಾಗೂ ಗ್ರಾಮಾಂತರ ಬಸವ ಜಯಂತಿ ವಾರ್ಷಿಕ ಸಮಾರೋಪ ಸಮಾರಂಭಗಳು ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತವೆ.


ಅದ್ಧೂರಿ ನವರಾತ್ರಿ ಆಚರಣೆ ಮಠದ ವೈಶಿಷ್ಟ್ಯಗಳಲ್ಲೊಂದು. ಶ್ರಾವಣಮಾಸದ ವಿಶೇಷ ಸಂದರ್ಭಗಳಲ್ಲಿ ಕೀರ್ತನೆ, ಶರಣರ ಪುರಾಣ ಪ್ರವಚನಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಪ್ರತಿ ಹುಣ್ಣಿಮೆಯಂದು ನಡೆವ ಶೂನ್ಯ ಸಂಪಾದನೆ ಪ್ರವಚನ ಕಾರ್ಯಕ್ರಮ ನಿರಂತರವಾಗಿ ನಡೆದು ಬರುತ್ತಿದೆ.

ಶ್ರೀ ಸಿದ್ಧಗಂಗಾ ಶಿಕ್ಷಣ ಹಾಗೂ ಇತರ ಸಂಸ್ಥೆಗಳು
೧. ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು (ಎಸ್‌ಐಟಿ) ೦೧
೨. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ೦೧
೩. ಸಿದ್ಧಗಂಗಾ ಪಾಲಿಟೆಕ್ನಿಕ್ ೦೧
೪. ಸಿದ್ಧಗಂಗಾ ಕಾಲೇಜ್ ಆಫ್ ಫಾರ್‍ಮಸಿ ೦೧
೫. ಸಿದ್ಧಗಂಗಾ ಕಾಲೇಜ್ ಆಫ್ ನರ್ಸಿಂಗ್ ೦೧
೬. ತಾಂತ್ರಿಕ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆಗಳು (ಐಟಿಐ) ೦೩
೭. ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ.) ೦೧
೮. ಶಿಕ್ಷಕರ ತರಬೇತಿ ಸಂಸ್ಥೆಗಳು (ಡಿ.ಎಡ್.) ೦೩
೯. ಪ್ರಥಮ ದರ್ಜೆ ಕಾಲೇಜುಗಳು ೦೪
೧೦. ಪದವಿಪೂರ್ವ ಕಾಲೇಜುಗಳು ೦೮
೧೧. ಸಂಯುಕ್ತ ಪದವಿಪೂರ್ವ ಕಾಲೇಜುಗಳು ೦೪
೧೨ ಪ್ರೌಢ ಶಾಲೆಗಳು ೫೫
೧೩. ಸಂಸ್ಕೃತ ಕಾಲೇಜು ೦೧
೧೪. ಸಂಸ್ಕೃತ ಪಾಠಶಾಲೆಗಳು ೨೦
೧೫. ಕನ್ನಡ ಪಂಡಿತ ಬಿ.ಎ. ಇಂಟಿಗ್ರೇಟೆಡ್ ಕೋರ್ಸ್ ೦೧
೧೬. ಉನ್ನತ ಪ್ರಾಥಮಿಕ ಶಾಲೆಗಳು ೦೭
೧೭. ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳು (ನರ್ಸರಿ) ೦೭
೧೮. ಅಂಧ ಮಕ್ಕಳ ಪಾಠಶಾಲೆ ೦೨
೧೯. ಶ್ರೀ ಸಿದ್ಧಗಂಗಾ ಅಂಗವಿಕಲರ ಸಮನ್ವಯ ಶಿಕ್ಷಣ ಕೇಂದ್ರ ೦೧
೨೦. ಶ್ರೀ ಸಿದ್ಧಗಂಗಾ ದೈಹಿಕ ಶಿಕ್ಷಣ ಮಹಾವಿದ್ಯಾಲಯ ೦೧
೨೧. ಆರೋಗ್ಯ ಸಂಸ್ಥೆ ೦೧
೨೨. ಗ್ರಂಥಾಲಯಗಳು ೦೫
೨೩. ವಾಚನಾಲಯಗಳು ೦೫
೨೪. ಉಚಿತ ವಿದ್ಯಾರ್ಥಿ ನಿಲಯಗಳು ೦೫
೨೫. ಸಹಕಾರಿ ಸಂಘಗಳು ೦೫
------------------------------------------------------
ಒಟ್ಟು ಸಂಸ್ಥೆಗಳು ೧೪೪
------------------------------------------------------

ಪವಾಡದ ಬೀಡಲ್ಲ, ಯೋಗಿ ಕಟ್ಟಿದ ನಾಡು!

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ನಂತರ ಶರಣರು ಗುಂಪುಗುಂಪಾಗಿ ಚದುರಿ ಹೋದರು. ಹಾಗೆ ಚದುರಿದ ಗುಂಪುಗಳಲ್ಲಿ ಕೆಲವು ಶಿವಗಂಗೆ, ಸಿದ್ಧಗಂಗೆ, ಗೂಳೂರು, ಗುಬ್ಬಿಯತ್ತ ಮುಖ ಮಾಡಿದವು. ಶರಣ ಧರ್ಮ ಬಿತ್ತರಿಸುವ ಪ್ರಯತ್ನ ನಡೆಯಿತು. ಆ ಕ್ರಾಂತಿಯ ಪ್ರತಿಫಲವೇ ಸಿದ್ಧಗಂಗೆ ಉಗಮಕ್ಕೆ ಪ್ರೇರಣೆ ಎನ್ನುತ್ತಾರೆ.

ಶಿಲೆಯೊಳಗಣ ಪಾವಕದಂತೆ, ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶಬ್ದದಂತೆ
ಗುಹೇಶ್ವರಾ, ನಿಮ್ಮ ಶರಣರ ಸಂಬಂಧ...
ಎಂಬ ಅಲ್ಲಮಪ್ರಭುವಿನ ವಚನದ ಸಾಲುಗಳನ್ನು ಕೇಳಿದಾಗಲೆಲ್ಲ ಶ್ರೀ ಶಿವಕುಮಾರ ಸ್ವಾಮೀಜಿ ನೆನಪಾಗುತ್ತಾರೆ. ಅವರು ಕಟ್ಟಿ ಬೆಳೆಸುತ್ತಿರುವ ಸಿದ್ಧಗಂಗಾ ಕ್ಷೇತ್ರ ಕಣ್ಮುಂದೆ ಬರುತ್ತದೆ.

ಹೌದು, ಬಸವಣ್ಣನವರು ಬೋಸಿದ ತತ್ತ್ವಗಳಿಗೆಲ್ಲ ಜೀವ ತುಂಬುತ್ತಿರುವ ಶ್ರೀ ಶಿವಕುಮಾರ ಸ್ವಾಮಿಗಳು ನೆನಪಾದಾಗಲೆಲ್ಲ, ಅವರ ಕಾಯಕ ಭೂಮಿಯಾದ ಶ್ರೀ ಸಿದ್ಧಗಂಗಾ ಕ್ಷೇತ್ರದ ಚಿತ್ರಣವೂ ಮನದಲ್ಲಿ ಮೂಡುತ್ತದೆ. ಅಂದಹಾಗೆ ಈ ಕ್ಷೇತ್ರಕ್ಕೆ ಭವ್ಯ ಗುರು ಪರಂಪರೆಯಿದೆ. ಶತಮಾನಗಳಷ್ಟು ಹಳೆಯದಾದ ಸುಂದರ ಇತಿಹಾಸವಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಶಿವ ಶಕ್ತಿ ಅಲ್ಲಿ ಶಾಶ್ವತವಾಗಿ ನೆಲೆಯೂರಿ ಬಿಟ್ಟಿದೆ.

ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ೬೬ ಕಿ.ಮಿ ದೂರ ಸಾಗಿದರೆ ತೂಮಕೂರು ನಗರ ವ್ಯಾಪ್ತಿಗೆ ಒಳಪಟ್ಟ ಶ್ರೀ ಸಿದ್ಧಗಂಗಾ ಕ್ಷೇತ್ರ ಸಿಗುತ್ತದೆ. ಸುಮಾರು ೬೦೦ ವರ್ಷಗಳ ಹಿಂದೆ ಶ್ರೀ ಗೋಸಲ ಸಿದ್ಧೇಶ್ವರರು ಈ ಮಠವನ್ನು ಸ್ಥಾಪಿಸಿದರು ಎಂಬುದು ಪ್ರತೀತಿ. ಹರದನಹಳ್ಳಿಯ ಹದಿನೈದನೆಯ ಪೀಠಾಪತಿಗಳಾದ ಗೋಸಲ ಸಿದ್ಧೇಶ್ವರರು ೧೦೧ ವಿರಕ್ತರೊಂದಿಗೆ ಸಂಚರಿಸುತ್ತಾ ಪ್ರಕೃ ತಿಯ ಮಡಿಲೆನಿಸಿದ ಸಿದ್ಧಗಂಗೆಗೆ ಬಂದರು. ಇಲ್ಲಿನ ಪ್ರಕೃತಿಗೆ ಮನಸೋತು ತುಮಕೂರು, ಗೂಳೂರು ಭಕ್ತರ ನೆರವಿನಿಂದ ಮಠ ಸ್ಥಾಪನೆ ಮಾಡಿದರು ಎಂಬುದು ಇತಿಹಾಸದ ಪುಟಗಳಲ್ಲಿ ಸದಾಖಲಾದ ಸಂಗತಿ. `ಗೋಸುಲ ಸಿದ್ಧೇಶ್ವರರು ತಪಸ್ಸಿನ ಫಲವಾಗಿ ಕಲ್ಲು ಬಂಡೆಯಲ್ಲಿ ಗಂಗೆ ಹರಿಯಿತು. ಹಾಗಾಗಿ ಈ ಕ್ಷೇತ್ರಕ್ಕೆ ಸಿದ್ಧಗಂಗಾ ಎಂಬ ಹೆಸರು ಬಂತು' ಎಂಬ ನಂಬಿಕೆಯೂ ಇದೆ.

ಸಿದ್ಧಗಂಗಾ ಪರಿಸರದ ಸುತ್ತ ಈಗ ಕೇವಲ ಮೂರು-ನಾಲ್ಕು ಮಠಗಳಿದ್ದರೂ ಕೂಡ, ಹಿಂದೆ ೬೪ ಮಠಗಳಿದ್ದವು ಎಂಬುದಕ್ಕೆ ಸಾಕಷ್ಟು ಐತಿಹಾಸಿಕ ಪುರಾವೆಗಳಿವೆ. ಅದರ ಮುಂದುವರಿಕೆ ಎಂಬಂತೆ ಕಂಬಾಳು ಮರುಳ ಸಿದ್ಧರ ಮಠ, ಎಳನಾಡು, ನೊಣವಿನಕೆರೆ...ಇತ್ಯಾದಿ ಮಠಗಳು ಇವತ್ತಿಗೂ ಧರ್ಮ ಜಾಗೃತಿ, ಸಮಾಜಮುಖಿಯಾದ ಕಾರ್ಯಗಳನ್ನು ಮಾಡುತ್ತಿವೆ. ಅಡವಿ ಸ್ವಾಮಿಗಳ ದಾಸೋಹ, ಉದ್ದಾನ ಶಿವಯೋಗಿಗಳ ವಿದ್ಯಾರ್ಜನೆ ಯೋಜನೆಗಳು, ಅದೆಲ್ಲಕ್ಕಿಂತ ಮಿಗಿಲಾಗಿ ಶ್ರೀ ಶಿವಕುಮಾರ ಶ್ರೀಗಳ ಸಮಾಜಮುಖಿ ಕಾರ್ಯಗಳಿಂದ ಇವತ್ತು ಶ್ರೀ ಮಠ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಗುರು ಪರಂಪರೆ
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ನಂತರ ಶರಣರು ಗುಂಪುಗುಂಪಾಗಿ ಚದುರಿ ಹೋದರು. ಹಾಗೆ ಚದುರಿದ ಗುಂಪುಗಳಲ್ಲಿ ಕೆಲವು ಶಿವಗಂಗೆ, ಸಿದ್ಧಗಂಗೆ, ಗೂಳೂರು, ಗುಬ್ಬಿಯತ್ತ ಮುಖ ಮಾಡಿದವು. ಶರಣ ಧರ್ಮ ಬಿತ್ತರಿಸುವ ಪ್ರಯತ್ನ ನಡೆಯಿತು. ಆ ಕ್ರಾಂತಿಯ ಪ್ರತಿಫಲವೇ ಸಿದ್ಧಗಂಗೆ ಉಗಮಕ್ಕೆ ಪ್ರೇರಣೆ ಎನ್ನುತ್ತಾರೆ. ಅಂದಹಾಗೆ ಆವತ್ತು ಶ್ರೀ ಕ್ಷೇತ್ರ ಈ ಪರಿ ಬೆಳೆದಿರಲಿಲ್ಲ. ದಟ್ಟವಾದ ಅಡವಿಯ ನಡುವೆ ಕಲ್ಲುಗುಹೆಗಳು, ಅಲ್ಲಿ ಧ್ಯಾನ, ಯೋಗಗಳಲ್ಲಿ ಮಗ್ನರಾಗುವ ಶಿವ ಶರಣರು... ಅಪ್ಪಟ ಧಾರ್ಮಿಕ ಕೇಂದ್ರವಾಗಿತ್ತು. ಶರಣ ಪರಂಪರೆಯನ್ನು ನಿರ್ಮಿಸುವ ಕೇಂದ್ರವಾಗಿತ್ತು.

ಗೋಸಲ ಸಿದ್ಧೇಶ್ವರರ ನಂತರ ಶಂಕರ ಪ್ರಭುಗಳು, ಚನ್ನಬಸವೇಶ್ವರರು...ಹೀಗೆ ಅನೇಕ ಶರಣರು ಪೀಠವನ್ನು ಅಲಂಕರಿಸಿದರು. ೧೮ನೇ ಶತಮಾನದಿಂದ ಈಚಗೆ ಶ್ರೀ ನಂಜುಂಡ ಸ್ವಾಮಿಗಳು (೧೭೮೪-೧೮೨೦), ಶ್ರೀ ರುದ್ರಸ್ವಾಮಿಗಳು(೧೮೨೦-೧೮೫೩), ಶ್ರೀ ಉದ್ದಾನಸ್ವಾಮಿಗಳು(೧೯೦೧-೧೯೪೧), ಶ್ರೀ ಮರುಳಾರಾಧ್ಯ ಸ್ವಾಮಿಗಳು(೧೯೨೪-೧೯೩೦) ಪೀಠಾಪತಿಗಳಾದರು. ಶರಣ ಧರ್ಮದ ತಿರುಳನ್ನು ಮನೆ-ಮನಗಳಿಗೆ ತಲುಪಿಸುವ ಪ್ರಯತ್ನ ಮಾಡಿದರು. ನಂತರ ಶ್ರೀ ಸಿದ್ಧಲಿಂಗ ಸ್ವಾಮಿಗಳು (೧೮೫೩-೧೯೦೧) ಪೀಠದಲ್ಲಿ ವಿರಾಜಮಾನರಾದರು.

ಆದರೂ ಈ ಕ್ಷೇತ್ರಕ್ಕೊಂದು ಹೊಸ ಖದರು ಬಂದಿದ್ದು ೧೮ನೇ ಶತಮಾನದ ನಂತರವೇ ಎನ್ನಬಹುದು. ೧೮೫೦ರ ಸುಮಾರಿಗೆ ಗುಬ್ಬಿಗೆ ಬಂದವರು, ಅಟವಿ ಸ್ವಾಮಿಗಳು. ಉತ್ತರ ಕರ್ನಾಟಕದಿಂದ ಬಂದ ಅಟವಿ ಶ್ರೀಗಳು, ಗೋಸಲ ಚನ್ನಬಸವೇಶ್ವರರ ಸಮಾ ಸೇವೆಯಲ್ಲಿ ಮಗ್ನರಾದರು. ಅಲ್ಲಿಯೇ ಒಂದು ಮಠವನ್ನು ಸ್ಥಾಪಿಸಿದರು. ಆದರೆ ಪಕ್ಕದ ಕ್ಷೇತ್ರವಾದ ಸಿದ್ಧಗಂಗೆಯ ಮಹಿಮೆ ಶ್ರೀಗಳನ್ನು ಸೆಳೆಯಿತು. ಅದೇ ಹೊತ್ತಿಗೆ ಸಿದ್ಧಗಂಗೆಯ ಪೀಠಾಪತಿಗಳಾದ ಸಿದ್ಧಲಿಂಗ ಶ್ರೀಗಳು ಲೌಕಿಕವನ್ನೆಲ್ಲ ತೊರೆದು ಅಧ್ಯಾತ್ಮ ಲೋಕದಲ್ಲಿ ಮುಳುಗಿಹೋಗಿದ್ದರು.

ದೈವಿಚ್ಛೆ ಎಂಬಂತೆ ಸಿದ್ಧಗಂಗೆಯ ಉಸ್ತುವಾರಿ ಹೊಣೆ ಅಟವಿ ಸ್ವಾಮಿಗಳ ಹೆಗಲೇರಿತು. ಮಠಕ್ಕೆ ಬರುವ ಭಕ್ತರಿಗೆಲ್ಲ ಅನ್ನ ದಾಸೋಹ ಆರಂಭವಾಯಿತು. ಸಿದ್ಧಲಿಂಗಸ್ವಾಮಿಗಳು ಐಕ್ಯರಾದ ಮೇಲೆ ಅಟವಿ ಶ್ರೀಗಳು ಪೂರ್ಣವಾಗಿ ಸಿದ್ಧಗಂಗೆಯ ಸೇವೆಗೆ ಸನ್ನದ್ಧರಾದರು. ಮಠದ ಅಧ್ಯಕ್ಷರಾಗಿ ಸಮಾಜಮುಖಿ ಕಾಯಕಗಳನ್ನು ಕೈಗೆತ್ತಿಕೊಂಡರು. ಸಂಸ್ಕೃತ ಪಾಠಶಾಲೆ ಪ್ರಾರಂಭವಾಯಿತು. ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಗೆಗೂ ಮಠ ಕೈ ಹಾಕಿತು. ವಿದ್ಯಾರ್ಥಿನಿಲಯ ಸ್ಥಾಪನೆ ಪರಿಕಲ್ಪನೆಯನ್ನು ಸಮಾಜಕ್ಕೆ ತೋರಿಸಿತು...ಅಲ್ಲಿಂದ ಶ್ರೀ ಮಠದ ಇತಿಹಾಸವೇ ಬದಲಾಯಿತು ಅಂದರೂ ತಪ್ಪಾಗಲಾರದು.

ತದನಂತರ ಉದ್ದಾನ ಶಿವಯೋಗಿಗಳು ಪೀಠಾರೋಹಣ ಮಾಡಿದರು. ಇವರ ಕಾಲದಲ್ಲಿ ದಾಸೋಹ ಯೋಜನೆ ಮತ್ತಷ್ಟು ಬಲಗೊಂಡಿತು. ೧೯೧೭ರ ಸುಮಾರಿಗೆ ಶ್ರೀಮಠದಿಂದ ಸಂಸ್ಕೃತ ಪಾಠಶಾಲೆ ಆರಂಭವಾಯಿತು. ಉಚಿತ ಸಾವರ್ಜನಿಕ ವಿದ್ಯಾರ್ಥಿನಿಲಯಕ್ಕೂ ಶ್ರೀಗಳು ಚಾಲನೆ ನೀಡಿದರು. ಅನ್ನ ದಾಸೋಹದ ಜತೆಗೆ ಅಕ್ಷರ ದಾಸೋಹಕ್ಕೂ ಆದ್ಯತೆ ನೀಡಿದ ಶ್ರೀಗಳು ಮಠವನ್ನು ಸಮಾಜಮುಖಿ ಕಾರ್ಯಗಳತ್ತ ಕೊಂಡ್ಯೊದರು. ಶ್ರೀ ಕ್ಷೇತ್ರದಲ್ಲಿ ಪ್ರತಿ ಶಿವರಾತ್ರಿಯಂದು ಅದ್ಧೂರಿಯಾಗಿ ನಡೆಯುವ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯ ರೂವಾರಿಗಳು ಕೂಡ ಉದ್ದಾನ ಶಿವಯೋಗಿಗಳೇ. ೧೯೦೫ರಲ್ಲಿ ಶ್ರೀಗಳು ಈ ಜಾತ್ರೆಯನ್ನು ಪ್ರಾರಂಭಿಸಿದರು. ಈ ಜಾತ್ರೆಯಲ್ಲಿ ಪಾಲ್ಗೊಳ್ಳುವರೆಲ್ಲರಿಗೂ ದಾಸೋಹ ನಡೆಸುವ ಬೃಹತ್ ಯೋಜನೆಯ ಸೂತ್ರಧಾರರಾದರು.
ಇವರು ಐಕ್ಯರಾದ ನಂತರ ಶ್ರೀ ಮರುಳಾರಾಧ್ಯರು(೧೯೨೪) ಪೀಠವನ್ನೇರಿದರು. ದುರಂತ ಎಂಬಂತೆ ಪೀಠವೇರಿದ ಅಲ್ಪ ಅವಯಲ್ಲೇ ಇವರು ಲಿಂಗೈಕ್ಯರಾದರು.

ಸುವರ್ಣಯುಗ
`ಇವ ಎಣ್ಣೆ ಬತ್ತಿಗಳಿಂದ ಸಿದ್ಧವಾದ ದೀಪವಿದ್ದಂತೆ, ಬತ್ತಿಯ ತುದಿಗೆ ಜ್ಯೋತಿ ಮುಟ್ಟಿದರೆ ಹೇಗೆ ಪ್ರಜ್ವಲಿಸುವುದೋ, ಹಾಗೇ ಈತನಿಂದಲೂ ಮಠ ಬೆಳಗುತ್ತದೆ' ಹಾಗಂತ ಉದ್ದಾನ ಶ್ರೀಗಳು, ಶ್ರೀ ಶಿವಕುಮಾರ ಸ್ವಾಮಿಜೀಯವರನ್ನು ಕುರಿತು ಭರವಸೆಯ ಸಾಲನ್ನು ಉದ್ಗರಿಸಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಶ್ರೀಗಳ ಭರವಸೆಯನ್ನು ಅಕ್ಷರಶಃ ನಿಜ ಎಂದು ಸಾಬೀತುಪಡಿಸಿದ್ದಾರೆ. ೧೯೪೧ರಿಂದ ಶ್ರೀ ಕ್ಷೇತ್ರ ಸ್ವಾಮೀಜಿಗಳ ದಿವ್ಯ ಮಾರ್ಗದರ್ಶನದಲ್ಲೇ ಮುಂದುವರಿದುಕೊಂಡು ಬರುತ್ತಿದೆ.
ಮಠದ ಆರ್ಥಿಕ ಸ್ಥಿತಿ ಆ ಪರಿ ಕರಾಳವಾಗಿದ್ದ ಕಾಲದಲ್ಲಿ ಮಠದ ಪೀಠ ಏರಿದ ಶ್ರೀಗಳು, ಮಠವನ್ನು ಈ ಪರಿ ಎತ್ತರಕ್ಕೆ ಏರಿಸುತ್ತಾರೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಮಠವನ್ನು ಅಂತಹದ್ದೊಂದು ಸ್ಥಿತಿಗೆ ಕೊಂಡು ಹೋಗಿರುವುದರ ಹಿಂದೆ ಶ್ರೀಗಳ ಅಪಾರ ಶ್ರಮವಿದೆ, ಸಾಧನೆಯಿದೆ. ಸಿದ್ಧಗಂಗಾ ಕ್ಷೇತ್ರ ಪವಾಡದ ಬೀಡಲ್ಲ, ಯೋಗಿ ಕಟ್ಟಿದ ನಾಡು. ಸ್ವಾಮಿಜೀಯವರ ಸಾಧನೆಯ ಕುರಿತಾಗಿ ಪ್ರತ್ಯೇಕವಾಗಿ ಅವಲೋಕಿಸಬೇಕಿರುವುದರಿಂದ ಇಲ್ಲಿ ಆ ಕುರಿತು ಹೆಚ್ಚು ಪ್ರಸ್ತಾಪಿಸುವುದಿಲ್ಲ.

ಜಾತ್ರೆಯ ವೈಶಿಷ್ಟ್ಯ
ಲೋಕದಲ್ಲಿ ಅದೆಷ್ಟೋ ಜಾತ್ರೆಗಳು ಜರುಗುತ್ತವೆ. ಆದರೂ ಸಿದ್ಧಗಂಗೆಯ ಜಾತ್ರೆ ಎಂದಾಕ್ಷಣ ನಮ್ಮಲ್ಲಿ ವಿಭಿನ್ನವಾದ ಭಾವವೊಂದು ಜಾಗೃತವಾಗುತ್ತದೆ. ಹೌದು ಜಾತ್ರೆಯ ಹಿಂದಿರುವ ಭವ್ಯವಾದ ಇತಿಹಾಸದ, ಶ್ರೀಗಳ ಸುಂದರವಾದ ಪರಿಕಲ್ಪನೆ ಉತ್ಸವಕ್ಕೊಂದು ಹೊಸ ಜೀವ ತುಂಬಿದೆ. ಶಿವರಾತ್ರಿ ಸಮಯದಲ್ಲಿ ಶ್ರೀ ಸಿದ್ಧಲಿಂಗೇಶ್ವರ ರಥೋತ್ಸವ, ಜಾತ್ರೆ, ದನಗಳ ಹಬ್ಬವನ್ನು ೧೦ ದಿನಗಳ ಕಾಲ ಆಚರಿಸುವ ಪರಿಕಲ್ಪನೆಗೆ ೧೯೦೯ರಲ್ಲಿ ಉದ್ದಾನ ಶಿವಯೋಗಿಗಳು ಚಾಲನೆ ನೀಡಿದರು. ಅಲ್ಲಿ ಸೇರುವ ಭಕ್ತರಿಗೆಲ್ಲ ಅನ್ನ ಸಂತರ್ಪಣೆ ಮಾಡುವ ವ್ಯವಸ್ಥೆ ಆರಂಭವಾಯಿತು. ಜಾತ್ರೆ ಸಮಯದಲ್ಲಿನ ದೇವರ ಉತ್ಸವ, ಶಿವರಾತ್ರಿಯ ಮರುದಿನ ಜರುಗುವ ರಥೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ದನಗಳ ಪರಿಷೆ ಮೊದಲಾದವು ಇವತ್ತಿಗೂ ಜನರನ್ನು ಆಕರ್ಷಿಸುತ್ತಿವೆ. ವರ್ಷ ಕಳೆದಂತೆ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಸಂಖ್ಯೆ ಏರುತ್ತಲೇ ಇದೆ. ೧೯೬೩ರಿಂದ ಈ ಜಾತ್ರೆಯಲ್ಲಿ ವಸ್ತುಪ್ರದರ್ಶನಕ್ಕೂ ಅವಕಾಶ ಕಲ್ಪಿಸಿಕೊಡಲಾಗಿದೆ.

ಪರಿಸರ ಪರಿಚಯ
ಶ್ರೀಮಠದಲ್ಲಿನ ರಮಣೀಯ ಪರಿಸರದಲ್ಲಿ ನೋಡಬೇಕಾದ ಸ್ಥಳಗಳು ಸಾಕಷ್ಟಿವೆ. ಪ್ರತಿ ಸ್ಥಳಕ್ಕೂ ಅದರದ್ದೇ ಆದ ವಿಶಿಷ್ಟ ಐತಿಹ್ಯವೂ ಇದೆ. ಬೆಟ್ಟದ ಮೇಲೆ ಶ್ರೀ ಸಿದ್ಧಲಿಂಗೇಶ್ವರ ಹಾಗೂ ಶ್ರೀ ಗಂಗಾಮಾತೆಯವರ ದೇವ ಮಂದಿರಗಳಿವೆ. ಬೆಟ್ಟದ ತಪ್ಪಲ್ಲಲ್ಲಿಯೇ ಹಳೆಯ ಮಠವಿದೆ. ಪಕ್ಕದಲ್ಲಿಯೇ ಪೂಜ್ಯ ಶಿವಯೋಗಿ ಶ್ರೀ ಉದ್ದಾನಸ್ವಾಮಿಗಳವರ ಗದ್ದುಗೆಯಿದ್ದು ಅದು ಜಾಗೃತ ಸ್ಥಾನವಾಗಿದೆ. ಅದರ ಸಮೀಪವೇ ಶ್ರೀಶ್ರೀಗಳವರ ಶಿವಯೋಗ ಮಂದಿರ ನಿರ್ಮಾಣವಾಗುತ್ತಿದೆ. ಹಿಂಭಾಗದಿಂದ ಮುಂದೆ ಸಾಗಿದರೆ ಸಿಗುವುದು ಕೆಂಪಹೊನ್ನಯ್ಯನವರು ಕಟ್ಟಿಸಿರುವ ಭವ್ಯವಾದ ಅತಿಥಿಗೃಹ. ಮಹಾನವಮಿ ಮಂಟಪ, ಪಕ್ಕದಲ್ಲಿ ಶ್ರೀ ಮರುಳಾರಾಧ್ಯರ ಗದ್ದುಗೆ, ಹಿಂಭಾಗಕ್ಕೆ ಅನತಿ ದೂರದಲ್ಲಿ ಗೋಶಾಲೆ ನೋಡಲೇ ಬೇಕಾದವು ಅಂದರೂ ತಪ್ಪಿಲ್ಲ.

ಮಠದ ಮುಂಭಾಗದಲ್ಲಿ ಪೂಜ್ಯ ಶ್ರೀಗಳವರ ಕಾರ್ಯಾಲಯವಿದೆ. ಅದರ ಎದುರಿಗೆ ಯಾತ್ರಾರ್ಥಿಗಳಿಗೆ ದರ್ಶನ ಕೊಡುವ, ಉದ್ಧರಣೆಗಳನ್ನು ನೀಡುವ ಪವಿತ್ರ ಜಾಗವಿದೆ. ಶ್ರೀಮಠಕ್ಕೆ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿ ಗೋಚರಿಸುವುದು ಶ್ರೀ ದರ್ಶನ ಮಂಟಪ, ಬಲಭಾಗದಲ್ಲಿ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಾಲಯ, `ಸಿದ್ಧಗಂಗಾ' ಮಾಸಿಕದ ಕಾರ್ಯಾಲಯ, ಶ್ರೀ ಸಿದ್ಧಲಿಂಗೇಶ್ವರ ಮುದ್ರಣಾಲಯಗಳಿವೆ. ಶ್ರೀ ಅಟವೀ ಸ್ವಾಮಿಗಳ ಗದ್ದುಗೆ ಕೂಡ ಅದರ ಸನಿಹದಲ್ಲಿದೆ. ಅವುಗಳ ಎದುರು ಭಾಗಕ್ಕೆ ಅಕ್ಕಿ ಗಿರಣಿ, ವಜ್ರಮಹೋತ್ಸವ ಸ್ಮಾರಕ ವಿದ್ಯಾರ್ಥಿನಿಲಯವಿದೆ. ಪಕ್ಕದಲ್ಲೇ ಅಂಧ ಮಕ್ಕಳ ಪಾಠಶಾಲೆ, ಸ್ವಲ್ಪ ಮುಂದೆ ಹೋದರೆ ಸಿಗುವುದು ಬೃಹತ್ ಕಲ್ಯಾಣಿ. ಅದಕ್ಕೆ ಎದುರಾಗಿ ಬೃಹತ್ ಕಲ್ಯಾಣ ಮಂಟಪ. ಇವೆಲ್ಲವಕ್ಕೂ ಮೊದಲೇ ಕಣ್ಣಿಗೆ ಕಾಣಸಿಗುವುದು ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಮತ್ತು ವೇದ ಮಹಾಪಾಠಶಾಲೆ.

ಇನ್ನೂ, ಗೋಶಾಲೆಯ ಸಮೀಪ ಸಾರ್ವಜನಿಕ ವಿದ್ಯಾರ್ಥಿನಿಲಯವಿದೆ. ಕ್ಯಾತ್ಸಂದ್ರದ ಕಡೆಯಿಂದ ಬರುವಾಗ ಕಾಣ ಸಿಗುವುದು ವಸತಿಗೃಹಗಳು. ಶ್ರೀ ಬಸವೇಶ್ವರ ಉಪಾಧ್ಯಾಯ ತರಬೇತಿ ಸಂಸ್ಥೆ, ವಸ್ತುಪ್ರದರ್ಶನದ ವಿಶಾಲ ಆವರಣ, ಶ್ರೀಮಠದ ಪರಿಸರವನ್ನು ಸದಾ ತಂಪಾಗಿಟ್ಟಿರುವ ತೋಟಗಳು... ಎಲ್ಲವೂ ಶಿವಮಯ, ಬೇಸತ್ತ ಮನಸ್ಸಿಗೆ ಆನಂದ ಕೊಡುವ ಶಾಂತ ತಾಣಗಳು. ಇನ್ನೂ ಪೂಜ್ಯ ಶ್ರೀಗಳವರ ಸಾನ್ನಿಧ್ಯದಲ್ಲಿ ಎಂಟು ಸಾವಿರ ವಿದ್ಯಾರ್ಥಿಗಳು ಸಮವಸ್ತ್ರಧಾರಿಗಳಾಗಿ ಕುಳಿತು ಸಂಜೆ ಹಾಗೂ ಮುಂಜಾನೆಯಲ್ಲಿ ಮಾಡುವ ಸಾಮೂಹಿಕ ಪ್ರಾರ್ಥನಾ ಸಭೆಯನ್ನು ನೋಡದವ ಖಂಡಿತವಾಗಿಯೂ ಪಾಪಿ ಬಿಡಿ !